ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ಮಹತ್ವದ ಹೋರಾಟ

ಎಎಫ್‌ಸಿ ಕಪ್‌ ಫುಟ್‌ಬಾಲ್‌: ಇಂದು ಟಿ.ಸಿ. ಸ್ಪೋರ್ಟ್ಸ್‌ ಎದುರಿನ ‘ಪ್ಲೇ ಆಫ್‌’ ಪಂದ್ಯ
Last Updated 19 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಎಫ್‌ಸಿ ಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಗುಂಪು ಹಂತಕ್ಕೆ ಲಗ್ಗೆ ಇಡುವತ್ತ ಚಿತ್ತ ನೆಟ್ಟಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಈ ಹಾದಿಯಲ್ಲಿ ಮತ್ತೊಂದು ಮಹತ್ವದ ಹೋರಾಟಕ್ಕೆ ಸನ್ನದ್ಧವಾಗಿದೆ.

ಮಂಗಳವಾರ ನಡೆಯುವ ಎರಡನೇ ಲೆಗ್‌ನ ‘ಪ್ಲೇ ಆಫ್‌’ ಹಣಾಹಣಿಯಲ್ಲಿ ಬಿಎಫ್‌ಸಿ, ಮಾಲ್ಡೀವ್ಸ್‌ನ ಟಿ.ಸಿ.ಸ್ಪೋರ್ಟ್ಸ್‌ ಕ್ಲಬ್‌ ವಿರುದ್ಧ ಆಡಲಿದೆ. ಬಲಿಷ್ಠ ತಂಡಗಳ ನಡುವಣ ಈ ಹೋರಾಟಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧವಾಗಿದೆ.

ಹೋದ ವಾರ ಮಾಲ್ಡೀವ್ಸ್‌ನ ಮಾಲೆಯಲ್ಲಿ ನಡೆದಿದ್ದ ಮೊದಲ ಲೆಗ್‌ನ ಹೋರಾಟದಲ್ಲಿ ಬೆಂಗಳೂರಿನ ತಂಡ 3–2 ಗೋಲುಗಳಿಂದ ಟಿ.ಸಿ.ಸ್ಪೋರ್ಟ್ಸ್‌ ತಂಡದ ಸವಾಲು ಮೀರಿತ್ತು. ಹೀಗಾಗಿ ಮಂಗಳವಾರದ ಪಂದ್ಯದಲ್ಲಿ ಡ್ರಾ ಮಾಡಿಕೊಂಡರೂ ಗೋಲುಗಳ ಸರಾಸರಿಯ ಆಧಾರದಲ್ಲಿ ಬಿಎಫ್‌ಸಿ ಮುಂದಿನ ಹಂತಕ್ಕೆ ಅರ್ಹತೆ ಗಳಿಸಲಿದೆ.

ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯಲಿರುವ ಬಿಎಫ್‌ಸಿ, ಇಂಡಿಯನ್‌ ಸೂಪರ್‌ ಲೀಗ್‌ನಲ್ಲೂ ಶ್ರೇಷ್ಠ ಆಟ ಆಡಿದೆ. ಇದು ಆಟಗಾರರ ವಿಶ್ವಾಸ ಹೆಚ್ಚುವಂತೆಮಾಡಿದೆ. ಮಾಲೆಯಲ್ಲಿ ಮಿಂಚು ಹರಿಸಿದ್ದ ಥಾಂಗ್‌ಕೋಶಿಯೆಮ್‌ ಹಾವೊಕಿಪ್‌ ಮತ್ತೊಮ್ಮೆ ಕಾಲ್ಚಳಕ ತೋರಲು ಕಾತರರಾಗಿದ್ದಾರೆ. ಮೊದಲ ಲೆಗ್‌ನ ಹಣಾಹಣಿಯಲ್ಲಿ ಹಾವೊಕಿಪ್‌ ಎರಡು ಗೋಲು ದಾಖಲಿಸಿ ಗೆಲುವಿನ ಹಾದಿ ಸುಗಮ ಮಾಡಿದ್ದರು. ಎರಿಕ್‌ ಪಾರ್ಟಲು ಕೂಡ ಮೋಡಿ ಮಾಡಿದ್ದರು. ಅವರು ಒಮ್ಮೆ ಚೆಂಡನ್ನು ಗುರಿ ತಲುಪಿಸಿದ್ದರು.

ಸುನಿಲ್‌ ಚೆಟ್ರಿ, ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು, ಜುನಾನ್‌ ಗೊಂಜಾಲೆಸ್‌, ಡಿಮಾಸ್‌ ಡೆಲ್‌ಗಾಡೊ ಮತ್ತು ಲೆನ್ನಿ ರಾಡ್ರಿಗಸ್‌ ಮೊದಲ ಲೆಗ್‌ನ ಪಂದ್ಯದಲ್ಲಿ ಆಡಿರಲಿಲ್ಲ. ಇವರಿಗೆ ಕೋಚ್‌ ಅಲ್ಬರ್ಟ್‌ ರೋಕಾ ವಿಶ್ರಾಂತಿ ನೀಡಿದ್ದರು. ಇವರು ಮಂಗಳವಾರದ ಹೋರಾಟದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ.‌

ಸುಭಾಶಿಶ್‌ ಬೋಸ್‌, ಮಲಸ್ವಾಮ್‌ ಜುವಾಲ, ಡೇನಿಯಲ್‌ ಲಾಲಿಂಪುಯಿಯಾ, ಜೋಮಿಂಗ್ಲಿಯಾನ ರಾಲ್ಟೆ, ಅಲ್ವಿನ್‌ ಜಾರ್ಜ್‌, ಎರಿಕ್‌ ಪಾರ್ಟಲು, ನಿಶು ಕುಮಾರ್‌, ಬೊಯಿಥಾಂಗ್‌ ಹಾವೊಕಿಪ್‌, ಉದಾಂತ್‌ ಸಿಂಗ್‌ ಮತ್ತು ರಾಹುಲ್‌ ಬೆಕೆ ಅವರೂ ತಂಡಕ್ಕೆ ಗೋಲಿನ ಕಾಣಿಕೆ ನೀಡುವ ಹುಮ್ಮಸ್ಸಿನಲ್ಲಿದ್ದಾರೆ.

ಮುಯ್ಯಿ ತೀರಿಸಿಕೊಳ್ಳುವ ತವಕಟಿ.ಸಿ.ಸ್ಪೋರ್ಟ್ಸ್‌ ತಂಡ ಬಿಎಫ್‌ಸಿಯನ್ನು ಅದರದ್ದೇ ನೆಲದಲ್ಲಿ ಮಣಿಸಿ ತವರಿನಲ್ಲಿ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ವಿಶ್ವಾಸ ಹೊಂದಿದೆ.

ಈ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಮೊದಲ ಲೆಗ್‌ನಲ್ಲಿ ಗುಣಮಟ್ಟದ ಆಟ ಆಡಿದ್ದ ಈ ತಂಡ ದ್ವಿತೀಯಾರ್ಧದಲ್ಲಿ ಬಿಎಫ್‌ಸಿಗೆ ಗೋಲು ಬಿಟ್ಟುಕೊಟ್ಟು ನಿರಾಸೆ ಕಂಡಿತ್ತು. ಈ ತಪ್ಪನ್ನು ತಿದ್ದಿಕೊಂಡು ಆಡಿದರೆ ಪ್ರವಾಸಿ ಪಡೆಯ ಜಯದ ಕನಸು ಸಾಕಾರಗೊಳ್ಳಬಹುದು.

ತಂಡಗಳು ಇಂತಿವೆ: ಬಿಎಫ್‌ಸಿ: ಸುನಿಲ್‌ ಚೆಟ್ರಿ, ಗುರುಪ್ರೀತ್‌ ಸಿಂಗ್‌ ಸಂಧು, ಥಾಂಗ್‌ಕೋಶಿಯೆಮ್‌ ಹಾವೊಕಿಪ್‌, ಸುಭಾಶಿಶ್‌ ಬೋಸ್‌, ಮಲಸ್ವಾಮ್‌ಜುವಾಲ, ಡೇನಿಯಲ್‌ ಲಾಲಿಂಪುಯಿಯಾ, ಜೋಮಿಂಗ್ಲಿಯಾನರಾಲ್ಟೆ, ಅಲ್ವಿನ್‌ ಜಾರ್ಜ್‌, ಎರಿಕ್‌ ಪಾರ್ಟಲು, ನಿಶು ಕುಮಾರ್‌, ಬೊಯಿಥಾಂಗ್‌ ಹಾವೊಕಿಪ್‌, ಉದಾಂತ್‌ ಸಿಂಗ್‌, ಹರ್ಮನ್‌ಜ್ಯೋತ್‌ ಸಿಂಗ್‌ ಖಾಬ್ರಾ, ರಾಹುಲ್‌ ಬೆಕೆ, ಲಾಲ್ತುಮಾವಿಯಾ ರಾಲ್ಟೆ, ಆ್ಯಂಟೋನಿಯೊ ರಾಡ್ರಿಗಸ್‌ ಡೊವಾಲೆ, ಅರ್ಣಬ್‌ ಮೊಂಡಲ್‌, ಜಾಯನರ್‌ ಲೌರೆನ್ಸೊ, ಮಿಕು ಮತ್ತು ಸೆಲ್ಟಸ್‌ ಪಾಲ್‌. ಕೋಚ್‌: ಅಲ್ಬರ್ಟ್‌ ರೋಕಾ.

ಟಿ.ಸಿ.ಸ್ಪೋರ್ಟ್ಸ್‌: ಇಬ್ರಾಹಿಂ ಮಹುದೀ, ಮಹಮ್ಮದ್‌ ಸಮೀರ್‌, ಅಹ್ಮದ್‌ ಆರೀಫ್‌, ಅಲಾಯೆಲ್ದಿನ್‌ ನಾಸರ್‌ ಅಲ್‌ಮಾಗ್‌ರೆಬಿ, ಇಬ್ರಾಹಿಂ ನದೀಮ್‌ ಅದಾಮ್‌, ಅನಟೋಲಿಯ ವ್ಲಾಸಿಚೆವ್‌, ಫರ‍್ಹಾ ಅಹ್ಮದ್‌, ಅಹ್ಮದ್‌ ರಿಲ್ವಾನ್‌, ಅಬ್ದುಲ್‌ ಹನೀಫ್‌, ಮುರುತಾಲ ಅದ್ನಾನ್‌, ಅಹ್ಮದ್‌ ಐಹಾಮ್‌, ಇಶಾನ್‌ ಇಬ್ರಾಹಿಂ, ಯಾಮೀನ್‌ ಇಬ್ರಾಹಿಂ, ಇಬ್ರಾಹಿಂ ವಾಹೀದ್ ಹಸನ್‌, ನಿಶಾಮ್‌ ಮಹಮ್ಮದ್‌ ರಶೀದ್‌, ಮಹಮ್ಮದ್‌ ಮಜೀನ್‌, ಮಹಮ್ಮದ್‌ ಅಜುಫಾನ್‌ ಮತ್ತು ಮಹಮ್ಮದ್‌ ಇನ್ಶಾದ್‌. ಕೋಚ್‌: ಎಂ.ಇಬ್ರಾಹಿಂ.

ಆರಂಭ: ರಾತ್ರಿ 8.

ಸ್ಥಳ: ಕಂಠೀರವ ಕ್ರೀಡಾಂಗಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT