ಉಡುಪಿ: ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಇಲಾಖೆಯ ನಿರ್ದೇಶನದಂತೆ ತಜ್ಞರ ತಂಡ ಬುಧವಾರ ಉಡುಪಿ ನಗರಸಭೆಗೆ ಭೇಟಿನೀಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಚರ್ಚೆ ನಡೆಸಿದರು.
ಅಧಿಕಾರಿಗಳಾದ ಲೋಕೇಂದ್ರ ಜೋಶಿ ಹಾಗೂ ರಾಜೇಶ್ ಅಯ್ಯಪ್ಪ ಸೂರ್ ತಂಡ ಶಾಸಕ ಕೆ. ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಆಯುಕ್ತ ಡಾ.ಉದಯ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ ಹಾಗೂ ಪರಿಸರ ಎಂಜಿನಿಯರ್ ಸ್ನೇಹಾ ಅವರೊಡನೆ ಸಮಾಲೋಚನೆ ನಡೆಸಿತು.
ಉಡುಪಿ ನಗರದಲ್ಲಿ ನಿತ್ಯ ಸಂಗ್ರಹವಾಗುವ ಜೈವಿಕ ತ್ಯಾಜ್ಯ ಬಳಸಿ ವಿದ್ಯುತ್ ತಯಾರಿ ಸಾಧ್ಯವಿದ್ದು ಕೇಂದ್ರ ಸರ್ಕಾರದಿಂದಲೂ ವಿಶೇಷ ಉತ್ತೇಜನ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬಳಿಕ ಅಲೆವೂರು ಕರ್ವಾಲಿನ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿನೀಡಿ ಅಲ್ಲಿನ ಸಿಬಂದಿ ಬಳಿ ಮಾಹಿತಿ ಪಡೆದರು. ಪ್ರತಿದಿನ 50 ಟನ್ ಜೈವಿಕ ತ್ಯಾಜ್ಯ ಲಭಿಸುತ್ತಿದ್ದು, 3,000 ಯುನಿಟ್ ವಿದ್ಯುತ್ ಉತ್ಪಾದನೆ ಸಾಧ್ಯವಿದೆ. ಈ ಕುರಿತು ಯೋಜನಾ ವರದಿ ಸಿದ್ಧಪಡಿಸಿ ಕಳುಹಿಸುವುದಾಗಿ ಲೋಕೇಂದ್ರ ಜೋಶಿ, ರಾಜೇಶ್ ಅಯ್ಯಪ್ಪ ಸೂರ್ ಹೇಳಿದರು.
ಕೇಂದ್ರ ಸರ್ಕಾರದ ಸಹಯೋಗವನ್ನು ಪಡೆದು ಜೈವಿಕ ವಿದ್ಯುತ್ ಸ್ಥಾವರ ಸ್ಥಾಪಿಸಿದಲ್ಲಿ ಉಡುಪಿ ಜನರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ತಿಳಿಸಿದರು. ನಗರಸಭಾ ಸಿಬ್ಬಂದಿ ಸುರೇಂದ್ರ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.