ಬ್ರಹ್ಮಾವರ: ’ಕರಾವಳಿ ರೈತರಿಗೆ ಅನುಕೂಲವಾಗುವಂತೆ ಬ್ರಹ್ಮಾವರದಲ್ಲಿ ಕೃಷಿ ಮಹಾವಿದ್ಯಾಲಯ ಆರಂಭಿಸಲು ಮುಖ್ಯಮಂತ್ರಿ ಜತೆಗೆ ಚರ್ಚಿಸುತ್ತೇನೆ‘ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ, ಭತ್ತದ ಚಾಪೆ ನೇಜಿಯನ್ನು ವೀಕ್ಷಿಸಿ, ಮನವಿ ಸ್ವೀಕರಿಸಿ ಮಾತನಾಡಿದರು.
350 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ 2010-11 ನೇ ಸಾಲಿನ ಬಜೆಟ್ನಲ್ಲಿ ಕೃಷಿ ಕಾಲೇಜು ಆರಂಭಿಸಲು ಅನುಮೋದನೆ ಆಗಿತ್ತು. ₹ 5 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಲು ಆದೇಶ ಆಗಿತ್ತು. ಆದರೆ, 2013 ರಲ್ಲಿ ಬೆಂಗಳೂರಿನಿಂದ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯಕ್ಕೆ ವಿಂಗಡಣೆ ಆಗಿದ್ದರಿಂದ ಕಾಲೇಜು ಸ್ಥಾಪನೆ ಕನಸು ನನಸಾಗಿಲ್ಲ. ಆದಷ್ಟು ಶೀಘ್ರವೇ ಇಲ್ಲಿ ಕೃಷಿ ಕಾಲೇಜು ಸ್ಥಾಪಿಸಲು ಶಾಸಕ ಕೆ. ರಘುಪತಿ ಭಟ್ ಕೃಷಿ ಸಚಿವರನ್ನು ಒತ್ತಾಯಿಸಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಎಂ. ಹನುಮಂತಪ್ಪ, ಬ್ರಹ್ಮಾವರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ್, ಕೆ.ವಿ.ಕೆ ಡಾ.ಧನಂಜಯ, ಡಾ.ಸುಧೀರ್ ಕಾಮತ್, ಡಾ.ನವೀನ್, ಡಾ.ಶಂಕರ್, ಡಾ.ಚೈತನ್ಯ, ಶ್ರೀದೇವಿ, ಡಾ.ಜಯಪ್ರಕಾಶ್ ಇದ್ದರು.