ಬೈಂದೂರು: ಇಲ್ಲಿನ ಹಿಂದೂ ಜಾಗರಣ ವೇದಿಕೆ ವತಿಯಿಂದ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಬೈಂದೂರು ಸೇನೇಶ್ವರ ದೇವಸ್ಥಾನದಿಂದ ಹೊರಟು ನಾಕಟ್ಟೆ ಮಾರ್ಗವಾಗಿ ಆಂಜನೇಯ ದೇವಸ್ಥಾನದವರೆಗೆ ಪಂಜಿನ ಮೆರವಣಿಗೆ ನಡೆಯಿತು.
ಭಾರತ ಮಾತೆಗೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ನಂತರ ಅಖಂಡ ಭಾರತದ ಭೂಪಟಕ್ಕೆ ಮಾತೆಯರ ಮೂಲಕ ದೀಪ ಬೆಳಗಿಸಿ, ಎಲ್ಲಾ ಕಾರ್ಯಕರ್ತರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಂಜಿನ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಹಾರಿಕಾ ಮಂಜುನಾಥ ‘ಅಖಂಡ ಭಾರತ ನಿರ್ಮಾಣ ನಮ್ಮ ಕನಸೇನೋ ಹೌದು. ಈ ಕನಸಿನ ಮೂಲಕ ಮಡಿದ ನಮ್ಮ ಹಿರಿಯರ ಆಶಯಗಳನ್ನು ಈಡೇರಿಸುವುದು ನಮ್ಮ ಕಾಯಕವಾಗಬೇಕು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಆಂತರಿಕ ಶತ್ರುಗಳನ್ನು ಮೊದಲು ನಾವು ಗೆಲ್ಲಬೇಕಾಗಿದೆ. ಆಮೇಲೆ ಬಾಹ್ಯ ಶತ್ರುಗಳನ್ನು ಎದುರಿಸಿ ಭಾರತದ ಅಖಂಡತೆಗಾಗಿ ಶ್ರಮಿಸುವ ಅನಿವಾರ್ಯತೆಯಲ್ಲಿ ನಾವಿಂದು ನಿಂತಿದ್ದೇವೆ. ಈ ಸತ್ಯದ ಅರಿವು ನಮ್ಮೊಳಗಾದಾಗ ಮಾತ್ರ ಖಂಡ ತುಂಡವಾದ ಭಾರತದ ಅಖಂಡತೆಯ ಹಾದಿ ಗೋಚರವಾಗುತ್ತದೆ. ಸಾಗುವ ದಾರಿ ಹತ್ತಿರವಾಗುತ್ತದೆ’ ಎಂದರು.
ವಕೀಲ ವಿಶ್ವನಾಥ್ ಶೆಟ್ಟಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಜಾಗ ರಣ ವೇದಿಕೆ ಜಿಲ್ಲಾ ಸಂಯೋಜಕ ಉಮೇಶ್ ಸೂಡಾ, ಹಿಂದೂ ಜಾಗರಣ ವೇದಿಕೆ ಬೈಂದೂರು ಅಧ್ಯಕ್ಷ ರಾಜೇಶ್ ಆಚಾರ್ ಬೈಂದೂರು ಇದ್ದರು.
ಬೈಂದೂರು ಹಿಂದೂ ಜಾಗರಣ ವೇದಿಕೆಯ ಅನೂಪ್ ಮೊಯಿಲಿ ಸ್ವಾಗತಿಸಿದರು. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಮಿತಿಸದಸ್ಯ ವಾಸುದೇವ ಗಂಗೊಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಶೋಧನ್ ಆಲೂರು ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಬಿಜೂರು ವಂದಿಸಿದರು.