ಕೊಡಿಗೇನಹಳ್ಳಿ: ‘ಜನರು ಶುದ್ಧ ಕುಡಿಯುವ ನೀರನ್ನ ಕುಡಿಯಬೇಕು’ ಎಂದು ಜಿಲ್ಲಾ ವಿಭಾಗದ ಆಪ್ತ ಸಮಾಲೋಚಕ ಚೇತನ್ ಸಲಹೆ ನೀಡಿದರು.
ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುಮಕೂರು ವಿಭಾಗ ಮತ್ತು ಮಧುಗಿರಿ ತಾಲ್ಲೂಕು ಮಟ್ಟದ ತಪಾಸಣಾ ಶಿಬಿರದಿಂದ ನಡೆದ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಂತ ಮತ್ತು ಮೂಳೆ ಫ್ಲೋರೋಸಿಸ್ (ಕಾಲು ಸೊಟ್ಟಗಾಗುವುದು) ಇರುವ ಜನರು ಆಸ್ಪತ್ರೆಯಲ್ಲಿ ಪರೀಕ್ಷಿಸಿ ಕಾಯಿಲೆ ಖಚಿತವಾದರೆ ಮುಂದಿನ ಎಲ್ಲ ಚಿಕಿತ್ಸೆಯನ್ನು ತುಮಕೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀಡಲಾಗುವುದು. ಜತೆಗೆ ಹೋಗಿ ಬರುವ ವೆಚ್ಚವನ್ನು ಕೂಡ ನೀಡಲಾಗುವುದು’ ಎಂದರು.
55 ಜನರಿಗೆ ಫ್ಲೋರೋಸಿಸ್ ಪರೀಕ್ಷಿಸಲಾಯಿತು. ತಾಲ್ಲೂಕು ವೈದ್ಯಾಧಿಕಾರಿ ರಮೇಶ್ ಬಾಬು, ವೈದ್ಯರಾದ ಜಗದೀಶ್ ನಾಯ್ಕ್ , ರಮೇಶ್, ಆರೋಗ್ಯ ನಿರೀಕ್ಷಕ ನವೀನ್, ಶಿವಪ್ರಕಾಶ್, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಎನ್ ರತ್ನಮ್ಮ ಜಬಿವುಲ್ಲಾ, ಸೀನಪ್ಪ ಇದ್ದರು.
ಹುಳಿಯಾರು: ‘ಪ್ರಸ್ತುತ ಸನ್ನಿವೇಶದಲ್ಲಿ ರೈತರು ಕೃಷಿಗೆ ಪೂರಕವಾದ ಉಪಕಸುಬು ಮಾಡುವುದು ಅನಿವಾರ್ಯವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ ಹೇಳಿದರು.
ಪಶು ಸಂಗೋಪನೆ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಹುಳಿಯಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 56 ಮಂದಿ ಫಲಾನುಭವಿಗಳಿಗೆ ಗಿರಿರಾಜ ಕೋಳಿ ಮರಿಗಳನ್ನು ವಿತರಿಸಿದರು.
‘ಸರ್ಕಾರ ಪಶು, ಕುರಿ ಹಾಗೂ ಕೋಳಿ ಮರಿಗಳನ್ನು ನೀಡುವ ಮೂಲಕ ಉಪಕಸುಬಿಗೆ ಉತ್ತೇಜನ ನೀಡುತ್ತಿದೆ. ಫಲಾನುಭವಿಗಳೂ ಸಹ
ಸರ್ಕಾರದ ಉದ್ದೇಶ ಅರ್ಥ ಮಾಡಿಕೊಂಡು ಉಪಕಸು ವೃದ್ಧಿ ಮಾಡಿಕೊಂಡು ಆರ್ಥಿಕ ಚೈತನ್ಯ ಸಾಧಿಸಬೇಕಿದೆ’ ಎಂದರು.
‘ಹುಳಿಯಾರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕೋಳಿ ಮರಿ ವಿತರಣೆ ಮಾಡಲಾಗುವುದು. ಪ್ರಾರಂಭಿಕ ಹಂತವಾಗಿ ಯಳನಡು ಹಾಗೂ ಹುಳಿಯಾರು ಮುಂದೆ ದೊಡ್ಡಬಿದರೆ ಗ್ರಾಮ ಪಂಚಾಯಿತಿಯಲ್ಲೂ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ವಿತರಿಸಲಾಗುವುದು’ ಎಂದರು.
ಡಿಎಸ್ಎಸ್ ಮುಖಂಡ ರಾಘವೇಂದ್ರ, ಪಶು ಇಲಾಖೆಯ ಭೈರಪ್ಪ, ಕಿರಣ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.