ಉಡುಪಿ: ಮೂರು ದಶಕಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಬದುಕು ಸಾಗಿಸುತ್ತಿದ್ದ ಎರಡು ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ನವದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಉಡುಪಿಯ ಕನ್ನಾರ್ಪಾಡಿ ನಿವಾಸಿ ಶರಣ್ ಶೆಟ್ಟಿ ಹಾಗೂ ನವ್ಯಾ ಶೆಟ್ಟಿ ದಂಪತಿ ಈ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಪೆರಂಪಳ್ಳಿ ಸಮೀಪದ ಪರಿಶಿಷ್ಟ ಸಮುದಾಯದ ಲೀಲಾ ಹಾಗೂ ಅವರ ಪುತ್ರನ ಮನೆಗೆ 30 ವರ್ಷಗಳಿಂದ ವಿದ್ಯುತ್ ಸಂಪರ್ಕ ಇರಲಿಲ್ಲ. ಎಂಟು ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಸೋಲಾರ್ ದೀಪಗಳನ್ನು ಒದಗಿಸಲಾಗಿತ್ತು. ಇದನ್ನು ಗಮನಿಸಿದ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಆಸರೆ ಚಾರಿಟೇಬಲ್ ಟ್ರಸ್ಟ್ ವಿದ್ಯುತ್ ಸಂಪರ್ಕ ಒದಗಿಸಿದೆ. ಇದಕ್ಕೆ ತಗುಲಿದ 30 ಸಾವಿರ ವೆಚ್ಚವನ್ನು ನವದಂಪತಿ ಭರಿಸಿದೆ.
ಭಾನುವಾರ ನಗರದ ಬಾಷೆಲ್ ಮಿಷನ್ ಸಭಾಂಗಣದಲ್ಲಿ ಮದುವೆ ಸಂಪ್ರದಾಯ ಮುಗಿಸಿದ ದಂಪತಿ ಲೀಲಾ ಅವರ ಮನೆಗೆ ತೆರಳಿ ವಿದ್ಯುತ್ ಸಂಪರ್ಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದರು.
ಆಸರೆ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ, ಕೋಶಾಧಿಕಾರಿ ಸತೀಶ್ ಕೆ.ಕುಲಾಲ್, ಚೇತನ್ ಕುಮಾರ್, ಅನಿಲ್ ಶೇರಿಗಾರ್, ಓವಿನ್, ಅಶ್ವಿನ್ ಶೆಟ್ಟಿ, ಅರುಣಾ ಎಸ್. ಪೂಜಾರಿ, ಪ್ರಶಾಂತ್ ಪೆರಂಪಳ್ಳಿ, ಡೆನ್ನಿಸ್ ಪ್ರಸನ್ನ, ಆಕಾಶ್ ಪೂಜಾರಿ, ಯಶೋದಾ ಇದ್ದರು.