ಉಡುಪಿ: ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮಾತ್ರವಲ್ಲ; ಮಾನವೀಯ ನೆಲೆಯಲ್ಲೂ ಮಹತ್ವ ಪಡೆದುಕೊಳ್ಳುತ್ತದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅದೆಷ್ಟೋ ಜೀವಗಳಿಗೆ ಅಷ್ಟಮಿ ಆಶಾಕಿರಣವಾಗುವುದು ವಿಶೇಷ.
ಪ್ರತಿವರ್ಷ ಅಷ್ಟಮಿಯ ಸಂದರ್ಭ ಉಡುಪಿಯಲ್ಲಿ ಚಿತ್ರವಿಚಿತ್ರ ವೇಷಗಳನ್ನು ಧರಿಸಿ ಸಾರ್ವಜನಿಕರನ್ನು ರಂಜಿಸಿ ಪ್ರತಿಯಾಗಿ ದೇಣಿಗೆ ಪಡೆಯುವ ಹಲವು ಕಲಾವಿದರಿದ್ದಾರೆ. ಇವರ್ಯಾರು ದೇಣಿಗೆಯನ್ನು ಸ್ವಂತಕ್ಕೆ ಬಳಸುವುದಿಲ್ಲ; ಬದಲಾಗಿ ಬಡ ಮಕ್ಕಳ ಅನಾರೋಗ್ಯಕ್ಕೆ ಭರಿಸುತ್ತಾರೆ.
ಪ್ರತಿವರ್ಷದಂತೆ ಈ ವರ್ಷವೂ ರವಿ ಕಟಪಾಡಿ ವಿಭಿನ್ನ ವೇಷಧರಿಸಿ ಜನರನ್ನು ಖುಷಿಪಡಿಸಿ ದೇಣಿಗೆ ಪಡೆಯುತ್ತಿದ್ದಾರೆ. ಈ ಬಾರಿ ರವಿ ಹಾಕಿರುವ ವೇಷ ವಾಂಪೈರ್. 6 ವರ್ಷಗಳಿಂದ ವೇಷ ಹಾಕುತ್ತಿರುವ ರವಿ ಕಟಪಾಡಿ 35 ಲಕ್ಷಕ್ಕೂ ಹೆಚ್ಚಿನ ದೇಣಿಗೆ ಸಂಗ್ರಹಿಸಿ ಹತ್ತಾರು ಮಕ್ಕಳ ಚಿಕಿತ್ಸೆಗೆ ನೀಡಿದ್ದಾರೆ.
ಮತ್ತೊಬ್ಬರು ಸಮಾಜ ಸೇವಕ ರಾಮಾಂಜಿ ಕೂಡ ಈ ಬಾರಿ ಸ್ನೇಕ್ ಕ್ವೀನ್ ವೇಷ ಹಾಕಿ ನಿಧಿ ಸಂಗ್ರಹ ಮಾಡುತ್ತಿದ್ದಾರೆ. ಇವರು ಕೂಡ ಸಂಗ್ರಹವಾದ ಹಣವನ್ನು ಬಡ ಮಗುವಿನ ಚಿಕಿತ್ಸೆಗೆ ಕೊಡಲಿದ್ದಾರೆ.