ಉಡುಪಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಕಚೇರಿ ಉದ್ಘಾಟನೆ ನಡೆಯಿತು.ಬಳಿಕ ಸಾರ್ವಜನಿಕರು ಸಚಿವರಿಗೆ ಅಹವಾಲು ಸಲ್ಲಿಸಿದರು.
ಮೀನುಗಾರರ ಮನವಿ: ಸಮುದ್ರತೀರದಿಂದ 12 ನಾಟಿಕಲ್ ಮೈಲು ಹೊರಗೆ ಕರ್ನಾಟಕದ ಮೀನುಗಾರರ ಮೇಲೆ ಮಹಾರಾಷ್ಟ್ರದ ಕೆಲವು ಮೀನುಗಾರರು ಹಲ್ಲೆ ನಡೆಸುತ್ತಿದ್ದಾರೆ. ಬೋಟ್ನಲ್ಲಿರುವ ಮೀನುಗಳನ್ನು ಹಾಗೂ ಸಲಕರಣೆಗಳನ್ನು ಲೂಟಿ ಮಾಡುತ್ತಿದ್ದಾರೆ. ಮೀನುಗಾರಿಕೆಗೆ ಅಡ್ಡಿ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಲ್ಪೆ ಮೀನುಗಾರರ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
12 ನಾಟಿಕಲ್ ಮೈಲಿನ ಹೊರಗಡೆ ದೇಶದ ಎಲ್ಲ ಮೀನುಗಾರರಿಗೂ ಮೀನುಗಾರಿಕೆ ಮಾಡಲು ಹಕ್ಕಿದೆ. ಆದರೆ, ಮಹಾರಾಷ್ಟ್ರದ ಮೀನುಗಾರರು ತೊಂದರೆ ಕೊಡುತ್ತಿದ್ದಾರೆ. ಪರಿಣಾಮ ರಾಜ್ಯದ ಮೀನುಗಾರರಿಗೆ ಪ್ರಾಣಭಯ ಕಾಡುತ್ತಿದೆ. ಸೂಕ್ತ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಮಹಾರಾಷ್ಟ್ರ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದ ಬೊಮ್ಮಾಯಿ, ಮೀನುಗಾರರಿಂದ ಲಿಖಿತ ದೂರು ದಾಖಲಿಸಿಕೊಳ್ಳುವಂತೆ ಎಸ್ಪಿ ನಿಶಾ ಜೇಮ್ಸ್ ಅವರಿಗೆ ಸೂಚಿಸಿದರು.
ಪರಿಶಿಷ್ಟ ಜಾತಿಯ ಸಾಂಪ್ರದಾಯಿಕ ಮರಳುಗಾರರನ್ನು ಪರವಾನಗಿ ಹಂಚಿಕೆಯಲ್ಲಿ ಹೊರಗಿಡಲಾಗಿದೆ. ನಾನ್ ಸಿಆರ್ಝೆಡ್ ವ್ಯಾಪ್ತಿಯಲ್ಲಿ ಮರಳು ಪರವಾನಗಿ ವಿತರಣೆ ಮಾಡುವಾಗ ಎಸ್ಸಿ ಫಲಾನುಭವಿಗಳನ್ನು ಪರಿಗಣಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಇದಕ್ಕೆ ಸ್ಪಂದಿಸಿದ ಸಚಿವರು, ಬೆಂಗಳೂರಿನಲ್ಲಿ ನಡೆಯುವ ಗಣಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಇದೇವೇಳೆ ಖಾಸಗಿ ಬಸ್ ಮಾಲೀಕರ ಸಂಘ ಹಾಗೂ ಛೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು.