ಉಡುಪಿ: ಇಲ್ಲಿನ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೆಳಗಾವಿ ವಿಭಾಗ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದುಕೊಂಡಿತು.
14 ವರ್ಷದೊಳಗಿನ ಬಾಲಕಿಯರ ವಿಭಾಗ, 17 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. 14 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಮೈಸೂರು ತಂಡ ಪ್ರಶಸ್ತಿ ಪಡೆಯಿತು.
ಫಲಿತಾಂಶ:14 ವರ್ಷದೊಳಗಿನವರ ವಿಭಾಗದಲ್ಲಿ (ಬಾಲಕಿಯರು) ಬೆಳಗಾವಿ ತಂಡ ಪ್ರಥಮ ಸ್ಥಾನ ಪಡೆಯಿತು. ಪ್ರೇರಣಾ ಎನ್.ಶೇಟ್, ನತಾಶಾ ಕಂಗುಟ್ಕರ್, ರಕ್ಷಾ ಡಿ.ಹೆಗ್ಡೆ, ಐಶ್ವರ್ಯ ತಲ್ವಾಲ್ಕರ್ ಉತ್ತಮ ಪ್ರದರ್ಶನ ನೀಡಿದರು. ಮೈಸೂರು ವಿಭಾಗ ದ್ವಿತೀಯ, ಬೆಂಗಳೂರು ವಿಭಾಗ ತೃತೀಯ ಸ್ಥಾನ ಪಡೆದುಕೊಂಡಿತು.
14 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಮೈಸೂರು ವಿಭಾಗ ಪ್ರಶಸ್ತಿ ಗೆದ್ದುಕೊಂಡಿತು. ಧರ್ಮಪ್ರಸಾಧ್, ವಿಜೇಶ್ ದೇವಾಡಿಗ, ಲಕ್ಷ ಚಂಗಪ್ಪ, ಯಶವಂತ ಉತ್ತಮ ಆಟವಾಡಿದರು. ವಿಜೇಶ್ ಹಾಗೂ ಯಶವಂತ್ ಉಡುಪಿ ಜಿಲ್ಲೆಯ ಆಟಗಾರರು. ಬೆಂಗಳೂರು ವಿಭಾಗ ದ್ವಿತೀಯ, ಬೆಳಗಾವಿ ತೃತೀಯ ಬಹುಮಾನ ಪಡೆಯಿತು.
17 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ಪ್ರಥಮ ಸ್ಥಾನ ಪಡೆದರೆ, ಮೈಸೂರು ದ್ವಿತೀಯ, ಬೆಂಗಳೂರು ತೃತೀಯ ಸ್ಥಾನ ಪಡೆದುಕೊಂಡಿತು. ಬೆಳಗಾವಿಯ ಸ್ನೇಹಾ, ಹರ್ಷಿತಾ, ಕೀರ್ತನಾ, ಸ್ಮೃತಿ ಗಮನ ಸೆಳೆದರು.
17 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಬೆಳಗಾವಿ ಮೊದಲ, ಬೆಂಗಳೂರು ಎರಡನೇ ಹಾಗೂ ಮೈಸೂರು ವಿಭಾಗ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಬೆಳಗಾವಿ ತಂಡದ ಸುಜ್ಞಾನ್ ಕಿಣಿ, ತರುಣ್ ಮೊರಬ್, ಸುಫಿಯಾನ್ ದೇಸ್ಯಾ, ತುಷಾರ್ ಮೆಟ್ರಾನಿ, ಉಮರ್ ಯಕ್ಷಾಂಬಿ ಉತ್ತಮ ಪ್ರದರ್ಶನ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ರಾಜ್ಯಮಟ್ಟದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ 23 ಕ್ರೀಡಾಪಟುಗಳಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಮಕ್ಕಳು ಪಾಠಕ್ಕೆ ನೀಡುವ ಪ್ರಾಮುಖ್ಯತೆಯನ್ನು ಆಟಕ್ಕೂ ನೀಡಬೇಕು. ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ. ಕ್ರೀಡೆಯಿಂದಲೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನೀತಾ ಗುರುರಾಜ್, ನಗರಸಭೆ ಸದಸ್ಯೆ ರಶ್ಮಿ ಸಿ.ಭಟ್, ಡಿಡಿಪಿಐ ಶೇಷಶಯನ ಕಾರಿಂಜ, ಉಡುಪಿ ಬಿಇಒ ಕೆ.ಮಂಜುಳಾ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ದೈಹಿಕ ಶಿಕ್ಷಣ ಅಧಿಕಾರಿ ಎಸ್.ಮಧುಕರ್, ಪ್ರಾಂಶುಪಾಲ ಎಸ್.ರುದ್ರೇಗೌಡ, ಎಸ್ಡಿಎಂಸಿ ಉಪಾಧ್ಯಕ್ಷೆ ತಾರಾದೇವಿ, ನಿರುಪಮಾ ಪ್ರಸಾದ್ ಶೆಟ್ಟಿ, ಕೋಚ್, ಕಿಶೋರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.