ಕೋಟ (ಬ್ರಹ್ಮಾವರ): ಮಂಗಳೂರಿನ ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಕುಂದಾಪುರ ಶಾಖೆಯು ಪ್ರಸಕ್ತ ಸಾಲಿನಲ್ಲಿ ಅತ್ಯಧಿಕ ಮೌಲ್ಯದ ಕೃಷಿ ಯಂತ್ರೋಪಕರಣ ಹಾಗೂ ಬಿಡಿಭಾಗಗಳನ್ನು ಖರೀದಿಸಿ ಕೋಟ ಸಹಕಾರಿ ವ್ಯವಸಾಯ ಸೇವಾ ಸಹಕಾರಿಯು ಸದಸ್ಯರಿಗೆ ವಿತರಿಸಿ ಈ ಕ್ಷೇತ್ರದಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ರವೀಂದ್ರ ಕಂಬಳಿ ಅವರು ಕೋಟ ಸಹಕಾರಿ ವ್ಯವಸಾಯ ಸಂಘದ ನಿರ್ದೇಶಕ ಎಚ್.ನಾಗರಾಜ ಹಂದೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಅವರಿಗೆ ಅಭಿನಂದನಾ ಪತ್ರ ಮತ್ತು ಸ್ಮರಣಿಕೆ ನೀಡಿದರು.
65 ವರ್ಷ ಪೂರೈಸಿರುವ ಸಂಘವು ₹176 ಕೋಟಿಗೂ ಹೆಚ್ಚು ಠೇವಣಿ ಹೊಂದಿದ್ದು ₹128 ಕೋಟಿಗೂ ಅಧಿಕ ಸಾಲ ನೀಡಿದೆ. ₹185 ಕೋಟಿಗೂ ಹೆಚ್ಚು ದುಡಿಯುವ ಬಂಡವಾಳ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ. 2021 ಮತ್ತು 2022ನೇ ಸಾಲಿನಲ್ಲಿ ಶೇ 96.25 ಸಾಲ ವಸೂಲಾತಿಯೊಂದಿಗೆ ಸಂಸ್ಥೆಯು ₹3.25 ಕೋಟಿ ಲಾಭ ಗಳಿಸಿದೆ.