<p><strong>ಉಡುಪಿ</strong>: ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಂಡು ಬರುವ ಬೈನೆ ಮರದ ಹಣ್ಣು ಇದುವರೆಗೆ ಯಾರಿಗೂ ಬೇಡವಾಗಿತ್ತು. ಆದರೆ ಈಗ ಅನ್ಯರಾಜ್ಯದವರಿಂದ ಬೇಡಿಕೆ ಬಂದಿರುವುದು ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.<br><br>ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ವಿವಿಧೆಡೆಯಿಂದ ಬೈನೆ ಹಣ್ಣಿನ ಗೊನೆಗಳನ್ನು ಕಡಿದು ಕೇರಳಕ್ಕೆ ಸಾಗಾಟ ಮಾಡಲಾಗುತ್ತಿದೆ. ಬೈನೆ ಹಣ್ಣು ಈ ಭಾಗದಲ್ಲಿ ಮನುಷ್ಯರಿಗೆ ಬೇಡವಾಗಿದ್ದರೂ ಮಂಗ ಮೊದಲಾದ ಪ್ರಾಣಿಗಳಿಗೂ ಮಂಗಟ್ಟೆ ಹಕ್ಕಿಗೂ ಅಚ್ಚು ಮೆಚ್ಚಿನ ಆಹಾರವಾಗಿದೆ.<br><br>ಇದೀಗ ಅವ್ಯಾಹತವಾಗಿ ಬೈನೆ ಹಣ್ಣುಗಳ ಗೊನೆಗಳನ್ನು ಕಡಿದು ಸಾಗಾಟ ನಡೆಸುವುದರಿಂದ ಆ ಮರಗಳ ಸಂಖ್ಯೆ ಇಳಿಮುಖವಾಗುವುದರ ಜೊತೆಗೆ ಹಲವು ಪ್ರಾಣಿ, ಪಕ್ಷಿಗಳಿಗೆ ಆಹಾರದ ಕೊರತೆಯೂ ಎದುರಾಗಬಹುದು ಎಂದು ಪ್ರಕೃತಿ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.<br><br>ಮಂಗಟ್ಟೆ ಹಕ್ಕಿಗಳು (ಮಲಬಾರ್ ಪೈಡ್ ಹಾರ್ನ್ಬಿಲ್) ಉಡುಪಿ ಕುಂದಾಪುರ, ಬ್ರಹ್ಮಾವರ ಮೊದಲಾದೆಡೆ ಸಾಕಷ್ಟು ಕಂಡು ಬರುತ್ತವೆ. ಬೈನೆ ಹಣ್ಣು ಆ ಹಕ್ಕಿಗಳ ಅಚ್ಚುಮೆಚ್ಚಿನ ಹಣ್ಣಾಗಿದೆ. ಇದೀಗ ಬೈನೆ ಮರದಿಂದ ಹಣ್ಣಿನ ಗೊನೆಗಳನ್ನೇ ಕಡಿದು ಸಾಗಿಸುತ್ತಿರುವುದು ಈ ಹಕ್ಕಿಗಳ ಆಹಾರ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀರಬಹುದು ಎಂದು ಪಕ್ಷಿತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.<br><br>ಬೈನೆ ಹಣ್ಣನ್ನು ಮಟ್ಟಿದರೆ ತುರಿಕೆ ಉಂಟಾಗುವುದರಿಂದ ಜನರು ಆ ಹಣ್ಣಿನ ಸಹವಾಸಕ್ಕೆ ಹೋಗುವುದಿಲ್ಲ. ಇದೀಗ ಈ ಹಣ್ಣಿಗೂ ಬೇಡಿಕೆ ಬಂದಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.<br><br>ಮಂಗಟ್ಟೆ ಹಕ್ಕಿಯಲ್ಲದೆ ಮಂಗಗಳು, ಹಾರು ಬೆಕ್ಕು (ಸಿವೆಟ್ ಕ್ಯಾಟ್) ಕೂಡ ಈ ಹಣ್ಣನ್ನು ತಿನ್ನುತ್ತವೆ ಎನ್ನುತ್ತಾರೆ ತಜ್ಞರು. ಕೇರಳದ ವ್ಯಾಪಾರಿಗಳು ಸ್ಥಳೀಯ ಮಧ್ಯವರ್ತಿಗಳ ಮೂಲಕ ಬೈನೆ ಹಣ್ಣಿನ ಗೊನೆಯನ್ನು ಕಡಿದು ಸಾಗಿಸುತ್ತಿದ್ದಾರೆ.<br><br>ಕೇರಳದಲ್ಲಿ ಮದುವೆ ಮೊದಲಾದ ಸಮಾರಂಭಗಳ ಚಪ್ಪರಕ್ಕೆ ಅಲಂಕಾರಿಕ ವಸ್ತುವಾಗಿ ಬೈನೆ ಹಣ್ಣಿನ ಗೊಂಚಲನ್ನು ಬಳಸುತ್ತಾರೆ. ಜೊತೆಗೆ ಈ ಹಣ್ಣನ್ನು ಸಂಸ್ಕರಿಸಿ ಬೇರೆ ಬೇರೆ ಉಪಯೋಗಕ್ಕೆ ಬಳಸುತ್ತಾರೆ. ಈ ಕಾರಣಕ್ಕೆ ಬೇಡಿಕೆ ಬಂದಿದೆ ಎಂದು ಸ್ಥಳೀಯ ಮಧ್ಯವರ್ತಿಗಳು ತಿಳಿಸಿದ್ದಾರೆ.</p>.<p><br><br>ಬ್ರಹ್ಮಾವರ ಪ್ರದೇಶದಲ್ಲಿನ ಬೈನೆ ಮರಗಳಿಂದ ಹಣ್ಣಾಗುವ ಹಂತದಲ್ಲಿರುವ ಹಣ್ಣಿನ ಗೊನೆಗಳನ್ನು ಕಡಿದು ಕೇರಳಕ್ಕೆ ವಾಹನದಲ್ಲಿ ಕೊಂಡೊಯ್ಯಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.<br><br>ಬೈನೆ ಮರವು ಬಹೂಪಯೋಗಿಯಾಗಿದೆ. ಇದರ ಹೂವಿನ ತೊಟ್ಟಿನಿಂದ ಶೇಂದಿ ಸಂಗ್ರಹಿಸಲಾಗುತ್ತಿದೆ. ಈ ಮರವನ್ನು ಹಳ್ಳಿಗಳಲ್ಲಿ ವಿವಿಧ ಕೃಷಿ ಉಪಕರಣಗಳ ತಯಾರಿಗೂ ಬಳಸುತ್ತಾರೆ. ಇದು ಔಷಧೀಯ ಗುಣವನ್ನೂ ಹೊಂದಿದೆ ಎನ್ನುತ್ತಾರೆ ಹಿರಿಯರು.<br><br>ಬೇಸಿಗೆ ಕಾಲದಲ್ಲಿ ಕರಾವಳಿ ಭಾಗದಲ್ಲಿ ತಾಳೆ ಬೊಂಡಕ್ಕೆ ಎಲ್ಲಿಲ್ಲದ ಬೇಡಿಕೆ ಕುದುರುತ್ತಿದೆ. ಇದೀಗ ಕೇರಳದಿಂದ ತಾಳೆ ಬೊಂಡವನ್ನು ಉಡುಪಿಗೆ ತರುವ ವಾಹನಗಳು ಮರಳುವಾಗ ಬೈನೆ ಹಣ್ಣಿನ ಗೊನೆಗಳನ್ನು ತುಂಬಿಕೊಂಡು ಹೋಗುತ್ತವೆ ಎನ್ನುತ್ತಾರೆ ಆ ಭಾಗದ ಜನರು. ಬೈನೆ ಹಣ್ಣನ್ನು ಕೇರಳದಲ್ಲಿ ಆನೆಗಳಿಗೆ ಆಹಾರವಾಗಿಯೂ ಬಳಕೆ ಮಾಡುತ್ತಾರೆ ಎನ್ನುತ್ತಾರೆ ಬೈನೆ ಹಣ್ಣು ಸಂಗ್ರಹಿಸುವವರು.<br><br>ಇಂದು ಮನುಷ್ಯರು ವಾಣಿಜ್ಯ ದೃಷ್ಟಿಯಿಂದ ಮಾತ್ರ ಆಲೋಚನೆ ಮಾಡುತ್ತಾರೆ. ಪ್ರಾಣಿ, ಪಕ್ಷಿಗಳ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಮಂಗ, ಹಾರು ಬೆಕ್ಕು ಮತ್ತು ಮಂಗಟ್ಟೆ ಹಕ್ಕಿಗೆ ಬೈನೆ ಹಣ್ಣು ಪ್ರಮುಖ ಆಹಾರವಾಗಿದೆ, ಆ ಮರಗಳ ಸಂಖ್ಯೆ ಕಡಿಮೆಯಾದರೆ ಅವುಗಳ ಆಹಾರ ಸರಪಳಿಯಲ್ಲೂ ವ್ಯತ್ಯಾಸವಾಗಲಿದೆ ಎಂದು ಪ್ರರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.<br><br></p>.<blockquote><strong>ಬೀಜ ಪ್ರಸರಣಕ್ಕೂ ತಡೆ<br></strong></blockquote>.<p>‘ವಾಣಿಜ್ಯ ದೃಷ್ಟಿಯಿಂದ ಯಾವುದೇ ಲಾಭ ಇಲ್ಲದ ಕಾರಣ ಬೈನೆ ಮರಗಳನ್ನು ಇಂದು ಕಡಿಯಲಾಗುತ್ತಿದೆ. ಈ ಕಾರಣಕ್ಕೆ ಉಡುಪಿ ಜಿಲ್ಲೆಯಲ್ಲಿ ಈ ಮರಗಳ ಸಂಖ್ಯೆ ಕಡಿಮೆಯಾಗಿದೆ. ಈಗ ಹಣ್ಣಾಗುವುದಕ್ಕೂ ಮೊದಲೇ ಗೊನೆಗಳನ್ನು ಕಡಿದು ಕೇರಳಕ್ಕೆ ಸಾಗಿಸಿದರೆ ಬೀಜ ಪ್ರಸರಣವೇ ನಿಂತು ಹೋಗಿ ಬೈನೆ ಮರಗಳು ಅವಸಾನದಂಚಿಗೆ ತಲುಪುವ ಸಾಧ್ಯತೆ ಇದೆ’ ಎಂದು ಪರಿಸರ ಕಾರ್ಯಕರ್ತ ಪ್ರೇಮಾನಂದ ಕಲ್ಮಾಡಿ ತಿಳಿಸಿದ್ದಾರೆ.<br><br>‘ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಬೈನೆ ಮರದಿಂದ ಶೇಂದಿ ತೆಗೆಯುತ್ತಿದ್ದರು. ಮತ್ತು ಅದರಿಂದ ಓಲೆ ಬೆಲ್ಲವನ್ನೂ ತಯಾರಿಸುತ್ತಿದ್ದರು. ಅದರಿಂದ ತಯಾರಿಸುವ ಔಷಧೀಯ ಗುಣವಿರುವ ಈಂದ್ ಹುಡಿಗೂ ಹೆಚ್ಚಿನ ಬೇಡಿಕೆ ಇತ್ತು. ಈ ಕಾರಣಕ್ಕೆ ಬೈನೆ ಮರವು ಬಡವರ ಕಲ್ಪವೃಕ್ಷವಾಗಿತ್ತು’ ಎಂದೂ ಅವರು ಹೇಳಿದ್ದಾರೆ.<br><br>‘ಬೈನೆ ಮರದಲ್ಲಿ ವರ್ಷದಲ್ಲಿ ಎರಡು ಬೆಳೆಯಾಗುತ್ತದೆ. ಅವುಗಳ ಸಂಖ್ಯೆ ಕಡಿಮೆಯಾದರೆ ಮಂಗ ಮೊದಲಾದ ವನ್ಯಜೀವಿಗಳಿಗೆ ಆಹಾರ ಕೊರತೆ ಉಂಟಾಗಿ, ಅವುಗಳು ಕೃಷಿ ಪ್ರದೇಶಗಳಿಗೆ ದಾಳಿ ಮಾಡುವ ಸಾಧ್ಯತೆ ಇದೆ. ಆಗ ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ ಇನ್ನಷ್ಟು ಹೆಚ್ಚಲಿದೆ. ಬೈನೆ ಹಣ್ಣುಗಳ ಅಲಭ್ಯತೆ ಸ್ಥಳೀಯ ಜೀವ ವೈವಿಧ್ಯಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದೂ ಅವರು ತಿಳಿಸಿದ್ದಾರೆ.</p><p>‘ಬೈನೆ ಹಣ್ಣನ್ನು ಹವ್ಯಾಹತವಾಗಿ ಕೊಂಡೊಯ್ಯುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದೇವೆ. ಜೊತೆಗೆ ಅರಣ್ಯ ಸಚಿವರಿಗೂ ಪತ್ರ ಬರೆಯಲಾಗುವುದು’ ಎಂದಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಂಡು ಬರುವ ಬೈನೆ ಮರದ ಹಣ್ಣು ಇದುವರೆಗೆ ಯಾರಿಗೂ ಬೇಡವಾಗಿತ್ತು. ಆದರೆ ಈಗ ಅನ್ಯರಾಜ್ಯದವರಿಂದ ಬೇಡಿಕೆ ಬಂದಿರುವುದು ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.<br><br>ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ವಿವಿಧೆಡೆಯಿಂದ ಬೈನೆ ಹಣ್ಣಿನ ಗೊನೆಗಳನ್ನು ಕಡಿದು ಕೇರಳಕ್ಕೆ ಸಾಗಾಟ ಮಾಡಲಾಗುತ್ತಿದೆ. ಬೈನೆ ಹಣ್ಣು ಈ ಭಾಗದಲ್ಲಿ ಮನುಷ್ಯರಿಗೆ ಬೇಡವಾಗಿದ್ದರೂ ಮಂಗ ಮೊದಲಾದ ಪ್ರಾಣಿಗಳಿಗೂ ಮಂಗಟ್ಟೆ ಹಕ್ಕಿಗೂ ಅಚ್ಚು ಮೆಚ್ಚಿನ ಆಹಾರವಾಗಿದೆ.<br><br>ಇದೀಗ ಅವ್ಯಾಹತವಾಗಿ ಬೈನೆ ಹಣ್ಣುಗಳ ಗೊನೆಗಳನ್ನು ಕಡಿದು ಸಾಗಾಟ ನಡೆಸುವುದರಿಂದ ಆ ಮರಗಳ ಸಂಖ್ಯೆ ಇಳಿಮುಖವಾಗುವುದರ ಜೊತೆಗೆ ಹಲವು ಪ್ರಾಣಿ, ಪಕ್ಷಿಗಳಿಗೆ ಆಹಾರದ ಕೊರತೆಯೂ ಎದುರಾಗಬಹುದು ಎಂದು ಪ್ರಕೃತಿ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.<br><br>ಮಂಗಟ್ಟೆ ಹಕ್ಕಿಗಳು (ಮಲಬಾರ್ ಪೈಡ್ ಹಾರ್ನ್ಬಿಲ್) ಉಡುಪಿ ಕುಂದಾಪುರ, ಬ್ರಹ್ಮಾವರ ಮೊದಲಾದೆಡೆ ಸಾಕಷ್ಟು ಕಂಡು ಬರುತ್ತವೆ. ಬೈನೆ ಹಣ್ಣು ಆ ಹಕ್ಕಿಗಳ ಅಚ್ಚುಮೆಚ್ಚಿನ ಹಣ್ಣಾಗಿದೆ. ಇದೀಗ ಬೈನೆ ಮರದಿಂದ ಹಣ್ಣಿನ ಗೊನೆಗಳನ್ನೇ ಕಡಿದು ಸಾಗಿಸುತ್ತಿರುವುದು ಈ ಹಕ್ಕಿಗಳ ಆಹಾರ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀರಬಹುದು ಎಂದು ಪಕ್ಷಿತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.<br><br>ಬೈನೆ ಹಣ್ಣನ್ನು ಮಟ್ಟಿದರೆ ತುರಿಕೆ ಉಂಟಾಗುವುದರಿಂದ ಜನರು ಆ ಹಣ್ಣಿನ ಸಹವಾಸಕ್ಕೆ ಹೋಗುವುದಿಲ್ಲ. ಇದೀಗ ಈ ಹಣ್ಣಿಗೂ ಬೇಡಿಕೆ ಬಂದಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.<br><br>ಮಂಗಟ್ಟೆ ಹಕ್ಕಿಯಲ್ಲದೆ ಮಂಗಗಳು, ಹಾರು ಬೆಕ್ಕು (ಸಿವೆಟ್ ಕ್ಯಾಟ್) ಕೂಡ ಈ ಹಣ್ಣನ್ನು ತಿನ್ನುತ್ತವೆ ಎನ್ನುತ್ತಾರೆ ತಜ್ಞರು. ಕೇರಳದ ವ್ಯಾಪಾರಿಗಳು ಸ್ಥಳೀಯ ಮಧ್ಯವರ್ತಿಗಳ ಮೂಲಕ ಬೈನೆ ಹಣ್ಣಿನ ಗೊನೆಯನ್ನು ಕಡಿದು ಸಾಗಿಸುತ್ತಿದ್ದಾರೆ.<br><br>ಕೇರಳದಲ್ಲಿ ಮದುವೆ ಮೊದಲಾದ ಸಮಾರಂಭಗಳ ಚಪ್ಪರಕ್ಕೆ ಅಲಂಕಾರಿಕ ವಸ್ತುವಾಗಿ ಬೈನೆ ಹಣ್ಣಿನ ಗೊಂಚಲನ್ನು ಬಳಸುತ್ತಾರೆ. ಜೊತೆಗೆ ಈ ಹಣ್ಣನ್ನು ಸಂಸ್ಕರಿಸಿ ಬೇರೆ ಬೇರೆ ಉಪಯೋಗಕ್ಕೆ ಬಳಸುತ್ತಾರೆ. ಈ ಕಾರಣಕ್ಕೆ ಬೇಡಿಕೆ ಬಂದಿದೆ ಎಂದು ಸ್ಥಳೀಯ ಮಧ್ಯವರ್ತಿಗಳು ತಿಳಿಸಿದ್ದಾರೆ.</p>.<p><br><br>ಬ್ರಹ್ಮಾವರ ಪ್ರದೇಶದಲ್ಲಿನ ಬೈನೆ ಮರಗಳಿಂದ ಹಣ್ಣಾಗುವ ಹಂತದಲ್ಲಿರುವ ಹಣ್ಣಿನ ಗೊನೆಗಳನ್ನು ಕಡಿದು ಕೇರಳಕ್ಕೆ ವಾಹನದಲ್ಲಿ ಕೊಂಡೊಯ್ಯಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.<br><br>ಬೈನೆ ಮರವು ಬಹೂಪಯೋಗಿಯಾಗಿದೆ. ಇದರ ಹೂವಿನ ತೊಟ್ಟಿನಿಂದ ಶೇಂದಿ ಸಂಗ್ರಹಿಸಲಾಗುತ್ತಿದೆ. ಈ ಮರವನ್ನು ಹಳ್ಳಿಗಳಲ್ಲಿ ವಿವಿಧ ಕೃಷಿ ಉಪಕರಣಗಳ ತಯಾರಿಗೂ ಬಳಸುತ್ತಾರೆ. ಇದು ಔಷಧೀಯ ಗುಣವನ್ನೂ ಹೊಂದಿದೆ ಎನ್ನುತ್ತಾರೆ ಹಿರಿಯರು.<br><br>ಬೇಸಿಗೆ ಕಾಲದಲ್ಲಿ ಕರಾವಳಿ ಭಾಗದಲ್ಲಿ ತಾಳೆ ಬೊಂಡಕ್ಕೆ ಎಲ್ಲಿಲ್ಲದ ಬೇಡಿಕೆ ಕುದುರುತ್ತಿದೆ. ಇದೀಗ ಕೇರಳದಿಂದ ತಾಳೆ ಬೊಂಡವನ್ನು ಉಡುಪಿಗೆ ತರುವ ವಾಹನಗಳು ಮರಳುವಾಗ ಬೈನೆ ಹಣ್ಣಿನ ಗೊನೆಗಳನ್ನು ತುಂಬಿಕೊಂಡು ಹೋಗುತ್ತವೆ ಎನ್ನುತ್ತಾರೆ ಆ ಭಾಗದ ಜನರು. ಬೈನೆ ಹಣ್ಣನ್ನು ಕೇರಳದಲ್ಲಿ ಆನೆಗಳಿಗೆ ಆಹಾರವಾಗಿಯೂ ಬಳಕೆ ಮಾಡುತ್ತಾರೆ ಎನ್ನುತ್ತಾರೆ ಬೈನೆ ಹಣ್ಣು ಸಂಗ್ರಹಿಸುವವರು.<br><br>ಇಂದು ಮನುಷ್ಯರು ವಾಣಿಜ್ಯ ದೃಷ್ಟಿಯಿಂದ ಮಾತ್ರ ಆಲೋಚನೆ ಮಾಡುತ್ತಾರೆ. ಪ್ರಾಣಿ, ಪಕ್ಷಿಗಳ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಮಂಗ, ಹಾರು ಬೆಕ್ಕು ಮತ್ತು ಮಂಗಟ್ಟೆ ಹಕ್ಕಿಗೆ ಬೈನೆ ಹಣ್ಣು ಪ್ರಮುಖ ಆಹಾರವಾಗಿದೆ, ಆ ಮರಗಳ ಸಂಖ್ಯೆ ಕಡಿಮೆಯಾದರೆ ಅವುಗಳ ಆಹಾರ ಸರಪಳಿಯಲ್ಲೂ ವ್ಯತ್ಯಾಸವಾಗಲಿದೆ ಎಂದು ಪ್ರರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.<br><br></p>.<blockquote><strong>ಬೀಜ ಪ್ರಸರಣಕ್ಕೂ ತಡೆ<br></strong></blockquote>.<p>‘ವಾಣಿಜ್ಯ ದೃಷ್ಟಿಯಿಂದ ಯಾವುದೇ ಲಾಭ ಇಲ್ಲದ ಕಾರಣ ಬೈನೆ ಮರಗಳನ್ನು ಇಂದು ಕಡಿಯಲಾಗುತ್ತಿದೆ. ಈ ಕಾರಣಕ್ಕೆ ಉಡುಪಿ ಜಿಲ್ಲೆಯಲ್ಲಿ ಈ ಮರಗಳ ಸಂಖ್ಯೆ ಕಡಿಮೆಯಾಗಿದೆ. ಈಗ ಹಣ್ಣಾಗುವುದಕ್ಕೂ ಮೊದಲೇ ಗೊನೆಗಳನ್ನು ಕಡಿದು ಕೇರಳಕ್ಕೆ ಸಾಗಿಸಿದರೆ ಬೀಜ ಪ್ರಸರಣವೇ ನಿಂತು ಹೋಗಿ ಬೈನೆ ಮರಗಳು ಅವಸಾನದಂಚಿಗೆ ತಲುಪುವ ಸಾಧ್ಯತೆ ಇದೆ’ ಎಂದು ಪರಿಸರ ಕಾರ್ಯಕರ್ತ ಪ್ರೇಮಾನಂದ ಕಲ್ಮಾಡಿ ತಿಳಿಸಿದ್ದಾರೆ.<br><br>‘ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಬೈನೆ ಮರದಿಂದ ಶೇಂದಿ ತೆಗೆಯುತ್ತಿದ್ದರು. ಮತ್ತು ಅದರಿಂದ ಓಲೆ ಬೆಲ್ಲವನ್ನೂ ತಯಾರಿಸುತ್ತಿದ್ದರು. ಅದರಿಂದ ತಯಾರಿಸುವ ಔಷಧೀಯ ಗುಣವಿರುವ ಈಂದ್ ಹುಡಿಗೂ ಹೆಚ್ಚಿನ ಬೇಡಿಕೆ ಇತ್ತು. ಈ ಕಾರಣಕ್ಕೆ ಬೈನೆ ಮರವು ಬಡವರ ಕಲ್ಪವೃಕ್ಷವಾಗಿತ್ತು’ ಎಂದೂ ಅವರು ಹೇಳಿದ್ದಾರೆ.<br><br>‘ಬೈನೆ ಮರದಲ್ಲಿ ವರ್ಷದಲ್ಲಿ ಎರಡು ಬೆಳೆಯಾಗುತ್ತದೆ. ಅವುಗಳ ಸಂಖ್ಯೆ ಕಡಿಮೆಯಾದರೆ ಮಂಗ ಮೊದಲಾದ ವನ್ಯಜೀವಿಗಳಿಗೆ ಆಹಾರ ಕೊರತೆ ಉಂಟಾಗಿ, ಅವುಗಳು ಕೃಷಿ ಪ್ರದೇಶಗಳಿಗೆ ದಾಳಿ ಮಾಡುವ ಸಾಧ್ಯತೆ ಇದೆ. ಆಗ ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ ಇನ್ನಷ್ಟು ಹೆಚ್ಚಲಿದೆ. ಬೈನೆ ಹಣ್ಣುಗಳ ಅಲಭ್ಯತೆ ಸ್ಥಳೀಯ ಜೀವ ವೈವಿಧ್ಯಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದೂ ಅವರು ತಿಳಿಸಿದ್ದಾರೆ.</p><p>‘ಬೈನೆ ಹಣ್ಣನ್ನು ಹವ್ಯಾಹತವಾಗಿ ಕೊಂಡೊಯ್ಯುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದೇವೆ. ಜೊತೆಗೆ ಅರಣ್ಯ ಸಚಿವರಿಗೂ ಪತ್ರ ಬರೆಯಲಾಗುವುದು’ ಎಂದಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>