ಉಡುಪಿ: ಸ್ಕಿಜೋಫ್ರೇನಿಯಾ ಕಾಯಿಲೆ ಕುರಿತು ಸಮಾಜದಲ್ಲಿರುವ ಕಳಂಕವನ್ನು ದೂರಮಾಡಿ ರೋಗಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಎಂದು ಡಿಎಚ್ಒ ಡಾ. ನಾಗಭೂಷಣ್ ಉಡುಪ ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಜಂಟಿ ಆಶ್ರಯದಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
2022ರ ವರ್ಷವನ್ನು ಭರವಸೆಯೊಂದಿಗೆ ಸಂಪರ್ಕ ಎಂಬ ಘೋಷವಾಕ್ಯದೊಂದಿಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಜಿಲ್ಲಾ ಮಾನಸಿಕ ಕಾರ್ಯಕ್ರಮ ಅಧಿಕಾರಿ ಡಾ.ಚಿದಾನಂದ ಸಂಜು ಸ್ಕಿಜೋಫ್ರೇನಿಯಾ ದೈಹಿಕ ಕಾಯಿಲೆಗಳಂತೆ ರಕ್ತ ಪರೀಕ್ಷೆಯಿಂದಾಗಲಿ, ಸ್ಕ್ಯಾನಿಂಗ್ನಿಂದಾಗಲಿ ಪತ್ತೆ ಹಚ್ಚಲು ಸಾಧ್ಯವಿಲ್ಲ. ಸೂಕ್ತ ಮಾನಸಿಕ ಸ್ಥಿತಿ ಪರೀಕ್ಷೆಗಳ ಮೂಲಕ ಮಾತ್ರ ಕಾಯಿಲೆಯನ್ನು ತಿಳಿದುಕೊಳ್ಳಲು ಸಾಧ್ಯ ಎಂದು ಹೇಳಿದರು.
ಸ್ಕಿಜೋಫ್ರೇನಿಯಾ ಬ್ರೈನ್ ಕ್ಯಾನ್ಸರ್ ಎಂಬುದು ಅತ್ಯಂತ ದೊಡ್ಡ ಮಿಥ್ಯ. ದೈಹಿಕ ಕಾಯಿಲೆಯಂತೆಯೇ ಮಾನಸಿಕ ಕಾಯಿಲೆಯ ಚಿಕಿತ್ಸೆಯ ಮೂಲಕ ಸ್ಕಿಜೋಫ್ರೇನಿಯಾ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ಅರಿಯಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಹೇಳಿದರು.
ಮನೋವೈದ್ಯ ಡಾ.ವಾಸುದೇವ್, ಡಾ.ಮನು ಆನಂದ ಉಪಸ್ಥಿತರಿದ್ದರು. ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಶೆಟ್ಟಿ ಸ್ವಾಗತಿಸಿದರು. ದೀಪಶ್ರೀ, ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಪದ್ಮಾ ವಂದಿಸಿದರು. ನರ್ಸಿಂಗ್ ಹಾಗೂ ಮನೋವಿಜ್ಞಾನದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮಾಹಿತಿ ನೀಡಲಾಯಿತು.