ಕುಂದಾಪುರ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಗಾಳಿಯ ಒತ್ತಡ ಹಾಗೂ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗಿದೆ. ಅದರಲ್ಲಿದ್ದ ಐದು ಮೀನುಗಾರರನ್ನು ರಕ್ಷಿಸಲಾಗಿದೆ.
ಬೋಟಿನಲ್ಲಿದ್ದ ತಾಂಡೇಲಾ ನಾಗಪ್ಪ ರಾಮ ಅಂಬಿಗ, ಕಲಾಸಿಯವರಾದ ಸಚಿನ್ ಉಲ್ಲಾಸ, ದೀಪಕ್ ಖಾರ್ವಿ, ಸುಭಾಷ್ ಗಾಂಗೇಶ್ವರ, ಸೂರಜ್ ಕುಮಾರ್ ಭಗತ್ ಅವರನ್ನು ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ರಾಜರಕ್ಷಾ ಬೋಟಿನಲ್ಲಿದ್ದ ಮೀನುಗಾರರು ರಕ್ಷಿಸಿ, ದಡಕ್ಕೆ ಕರೆತಂದಿದ್ದಾರೆ.
ಘಟನಾ ವಿವರ: ಉದ್ಯಾವರ ಸಂಪಿಗೆನಗರದ ಮುಹಮ್ಮದ್ ಹನೀಫ್ ಮಾಲೀಕತ್ವದ ಮನಾಲ್ ಹೆಸರಿನ ಬೋಟು ಮಲ್ಪೆಯಿಂದ ಆಳಸಮುದ್ರದ ಮೀನುಗಾರಿಕೆಗೆ ತೆರಳಿತ್ತು. ಮಾರ್ಚ್ 31ರಂದು ಮಧ್ಯರಾತ್ರಿ ಗಂಗೊಳ್ಳಿಯಿಂದ ನೇರ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಗಾಳಿಯ ಒತ್ತಡ ಹಾಗೂ ಅಲೆಗಳ ಅಬ್ಬರಕ್ಕೆ ಸಿಲುಕಿ ಬೋಟಿನ ಎಂಜಿನ್ ಕೆಳಭಾಗದ ಫೈಬಲ್ ಶೀಟ್ ಒಡೆದಿದೆ ಎನ್ನಲಾಗಿದೆ. ಬಳಿಕ ನೀರು ಬೋಟಿನೊಳಗೆ ನುಗಿದ್ದು, ಕೂಡಲೇ ರಾಜರಕ್ಷಾ ಬೋಟಿನವರಿಗೆ ಮಾಹಿತಿ ನೀಡಿದ್ದರಿಂದ ಮುಳುಗುತ್ತಿದ್ದ ಬೋಟಿ ನಲ್ಲಿ ಇದ್ದವರ ಪ್ರಾಣ ರಕ್ಷಣೆಯಾಗಿದೆ.
ದುರಂತದಲ್ಲಿ ಬೋಟು ಸಮುದ್ರ ಪಾಲಾಗಿದೆ. ಸುಮಾರು ₹ 45 ಲಕ್ಷನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.