ಹೆಬ್ರಿ: ಚಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಕಬೆಟ್ಟು ಗ್ರಾಮಕ್ಕೆ ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಶಶಿಧರ್ ಕೆ.ಜಿ. ಭೇಟಿನೀಡಿ ಜನರ ಜೊತೆ ಸಂವಾದ ನಡೆಸಿದರು.
ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಎರಡು ದಿನಗಳ ಹಿಂದೆ, ಸ್ಥಳೀಯರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿ ಈ ಬಗ್ಗೆ ಗ್ರಾಮದಲ್ಲಿ ಬ್ಯಾನರ್ ಅಳವಡಿಸಿದ್ದರು.
ಸ್ಥಳ ಪರಿಶೀಲನೆ ನಡೆಸಿದ ಶಶಿಧರ್ ಕೆ.ಜಿ. ಬೊರ್ವೆಲ್ ಅಳವಡಿಸಿದ ಜಾಗ, ರಸ್ತೆ ಸಂಪರ್ಕದ ಕುರಿತು ಪರಿಶೀಲನೆ ನಡೆಸಿ ಜನರ ಮನವೊಲಿಸಲು ಪ್ರಯತ್ನಿಸಿದರು.
‘ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ವಿಚಾರವಾಗಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ರಸ್ತೆ ನಿರ್ಮಾಣಕ್ಕೆ ಅರಣ್ಯ ನಿಯಮಗಳು ತೊಡಕಾಗಿರುವುದರಿಂದ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಸಾಧ್ಯವಾದಷ್ಟು ಮಟ್ಟಿಗೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.
ನಮ್ಮ ಸಮಸ್ಯೆ ಬಗೆಹರಿಯುವವರೆಗೆ ಬ್ಯಾನರ್ ತೆರವುಗೋಳಿಸುವುದಿಲ್ಲ. ನಮ್ಮನ್ನು ಓಲೈಸಲು ಬರಬೇಡಿ. ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿದ ನಂತರವೇ ನಮ್ಮ ಹಕ್ಕು ಚಲಾಯಿಸುತ್ತೇವೆ ಎಂದು ಊರಿನ ಜನ ಹೇಳಿದ್ದಾರೆ.