ಬ್ರಹ್ಮಾವರ: ಅಂಬೇಡ್ಕರ್ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ₹ 7 ಲಕ್ಷ ಸಹಾಯಧನವನ್ನು ಘೋಷಿಸಿ, ಕೂಡಲೇ ಅನುಷ್ಠಾನಗೊಳಿಸಲು ಆಗ್ರಹಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಸಮತಾ ಸೈನಿಕ ದಳ ಮತ್ತು ಭೀಮ್ ಆರ್ಮಿ ಸಹಯೋಗದಲ್ಲಿ ಮಂಗಳವಾರ ಬ್ರಹ್ಮಾವರದಲ್ಲಿ ಪ್ರತಿಭಟನೆ ನಡೆಯಿತು.
ಸರ್ಕಾರ ಸರ್ವರಿಗಾಗಿ ಸೂರು ಗುಡಿಸಲು ರಹಿತ ರಾಜ್ಯ ಎಂದು ಘೋಷಿಸಿದ್ದರೂ, ರಾಜ್ಯದಾದ್ಯಂತ ಸಾಕಷ್ಟು ಮಂದಿ ಎಸ್ಸಿ, ಎಸ್ಟಿ ಸಮುದಾಯದವರು ಇನ್ನೂ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಕಟ್ಟಡ ಸಾಮಗ್ರಿಗಳ ಬೆಲೆ 5 ಪಟ್ಟು ಜಾಸ್ತಿಯಾಗಿದ್ದರೂ ಸರ್ಕಾರ ಕೇವಲ ₹ 1.80 ಲಕ್ಷ ಸಹಾಯಧನ ನೀಡುತ್ತಿದೆ. ಅದರಲ್ಲಿ ಮನೆಯ ಪಂಚಾಂಗ ಹಾಕಲೂ ಅಸಾಧ್ಯವಾಗಿದೆ. ಅದೂಕೆಲವರಿಗೆ ಮಾತ್ರ ಮಂಜೂರಾಗುತ್ತಿದೆ ಎಂದು ಪ್ರತಿಭಟನಕಾರರು ತಿಳಿಸಿದರು. ಸಾಕಷ್ಟು ಮನವಿ ನೀಡಿದ ಮೇಲೆ ₹ 5 ಲಕ್ಷ ಸಹಾಯಧನ ನೀಡುವುದಾಗಿ ಘೋಷಣೆಯಾಯಿತು. ಅದು ಇದುವರೆಗೂ ಕಾರ್ಯಗತವಾಗಿಲ್ಲ ಎಂದು ಪ್ರತಿಭಟನಕಾರರು ದೂರಿದರು.
ವಕೀಲ ಉದಯ ಕುಮಾರ್, ರಿಪಬ್ಲಿಕನ್ ಪಾರ್ಟಿ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಡೂರು, ಮಹಿಳಾ ಅಧ್ಯಕ್ಷೆ ಜ್ಯೋತಿ ಶಿರಿಯಾರ, ಭೀಮ್ ಆರ್ಮಿಯ ಪ್ರಕಾಶ್ ಹೇರೂರು ಮಾತನಾಡಿದರು.
ಇದಕ್ಕೂ ಮುನ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನ ಅಂಗವಾಗಿ ದೀಪ ಬೆಳಗಿ, ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.