ಉಡುಪಿ: ಹಸೆಮಣೆ ಏರಲು ಸಿದ್ಧರಾಗಿದ್ದ ವಧು–ವರರು ಗುರುವಾರ ಮತಗಟ್ಟೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಹೊಸ ಜೀವನಕ್ಕೆ ಕಾಲಿಡುವ ಮುನ್ನ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಉಡುಪಿಯ ಮಾರ್ಪಳ್ಳಿ ನಿವಾಸಿ ಶ್ವೇತಾ ಹಾಗೂ ಶಶಿಕುಮಾರ್ ದಂಪತಿ ಕೊರಂಗರ ಪಾಡಿ ಗ್ರಾಮದ ಕೆಮ್ತೂರು ಶಾಲೆಯ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ಮಲ್ಪೆಯ ಕೊಳ ನಿವಾಸಿ ದೀಪಾ ಅವರು ಹಸೆಮಣೆ ಏರುವ ಮುನ್ನ ಮಲ್ಪೆಯ ಮತಗಟ್ಟೆಗೆ ತೆರಳಿ ಮತಹಾಕಿದರು. ಬಳಿಕ ಕಮಲಶಿಲೆಯ ಕಲ್ಯಾಣಮಂಟಪದಲ್ಲಿ ನಿಶ್ಚಯವಾಗಿದ್ದ ತಮ್ಮ ಮದುವೆಗೆ ಕುಟುಂಬ ಸಮೇತವಾಗಿ ತೆರಳಿದರು.
ಕಾಪುವಿನ ಕರಂದಾಡಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ರಿತೇಶ್ ಸನೀಲ್ ಮತದಾನ ಮಾಡಿ, ಬಳಿಕ ಮದುವೆ ಮನೆಗೆ ತೆರಳಿದರು.