ಉಡುಪಿ: ಬೌದ್ಧ ಮಹಾಸಭಾ ಉಡುಪಿಯಿಂದ ಅಂಬೇಡ್ಕರ್ ಅವರ 64ನೇ ಧಮ್ಮ ಚಕ್ರ ಪ್ರವರ್ತನಾ ದಿನದ ಅಂಗವಾಗಿಭಾನುವಾರ ಪರಿಶಿಷ್ಟ ಜಾತಿಗೆ ಸೇರಿದ 50ಕ್ಕೂ ಹೆಚ್ಚು ಮಂದಿ ಬೌದ್ಧ ಧರ್ಮ ಸ್ವೀಕರಿಸಿದರು. ಮೈಸೂರಿನ ಕೊಳ್ಳೇಗಾಲದ ಜೀವನ ಬುದ್ಧ ವಿಹಾರದ ಸುಗತಪಾಲ ಭಂತೇಜಿ ಧಮ್ಮ ದೀಕ್ಷೆಯ ಪ್ರಮಾಣವಚನ ಬೋಧಿಸಿದರು.
ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಸ್ಕರ್ ವಿಟ್ಲ ಮಾತನಾಡಿ, ‘ಪರಿಶಿಷ್ಟ ಜಾತಿಯವರು ಹಿಂದೂಗಳಲ್ಲ; ವರ್ಣ ವ್ಯವಸ್ಥೆಯಲ್ಲಿ ಅವರಿಗೆ ಸ್ಥಾನವಿಲ್ಲ. ಅವರು ಮೂಲತಃ ಬೌದ್ಧ ಧರ್ಮೀಯರು. ಅಂಬೇಡ್ಕರ್ ಅವರು ಎಲ್ಲ ಧರ್ಮವನ್ನೂ ಅದರ ಮೂಲ ಭಾಷೆಯಲ್ಲೇ ಅಧ್ಯಯನ ಮಾಡಿ, ಕೊನೆಗೆ ಬೌದ್ಧ ಧರ್ಮವನ್ನು ಅದರ ಮೂಲ ಪಾಲಿ ಭಾಷೆಯಲ್ಲೇ ಅರಿತು, ಈ ನೆಲದಲ್ಲಿ ಹುಟ್ಟಿದ ಬೌದ್ಧ ಧರ್ಮವನ್ನು ತಮ್ಮ ಅನುಯಾಯಿಗಳೊಂದಿಗೆ ಸ್ವೀಕರಿಸಿದರು’ ಎಂದರು.
ಸುಗತಪಾಲ ಭಂತೇಜಿ ಮಾತನಾಡಿ, ‘ಅಂಬೇಡ್ಕರ್ ಮಹಿಳೆಯರಿಗೆ, ಪರಿಶಿಷ್ಟ ಜಾತಿಯವರಿಗೆ ಮತದಾನ, ಆಸ್ತಿ ಹಾಗೂ ವಿದ್ಯೆ ಪಡೆಯುವ ಹಕ್ಕನ್ನು ಕೊಡಿಸಿದರು’ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸುಂದರ ಮಾಸ್ತರ್, ಶ್ಯಾಮರಾಜ್ ಬಿರ್ತಿ, ನಾರಾಯಣ ಮಣೂರು, ಶೇಖರ್ ಹಾವಂಜೆ, ಮಂಜುನಾಥ ಗಿಳಿಯಾರು, ಗೋಪಾಲಕೃಷ್ಣ ಕುಂದಾಪುರ ಅವರೂ ಇದ್ದರು.