ಬ್ರಹ್ಮಾವರ: ಮಕ್ಕಳಲ್ಲಿ ದೈಹಿಕ ಕ್ಷಮತೆ, ಉತ್ತಮ ಆರೋಗ್ಯ ಮತ್ತು ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಪಠ್ಯೇತರ ಚಟುವಟಿಕೆಗಳು ಅತಿ ಮುಖ್ಯವಾಗಿವೆ. ಈ ನಿಟ್ಟಿನಲ್ಲಿ ಜಿ.ಎಂ ಸಂಸ್ಥೆಯು ಇಂತಹ ಚಟುವಟಿಕೆಗಳ ಆಗರವಾಗಿದೆ ಎಂದು ಶಾಲೆಯ ಹಳೇ ವಿದ್ಯಾರ್ಥಿ ಹಾಗೂ ಇನ್ಫೊಸಿಸ್ ಉದ್ಯೋಗಿ ಆದರ್ಶ ಆಚಾರ್ಯ ಹೇಳಿದರು.
ಬ್ರಹ್ಮಾವರದ ಜಿ.ಎಂ.ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಶುಕ್ರವಾರ ನಡೆದ ಚಿಣ್ಣರ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಒಳ್ಳೆಯ ಶಿಕ್ಷಣವನ್ನು ನೀಡಿ, ಉತ್ತಮ ವ್ಯಕ್ತಿತ್ವ ಹಾಗೂ ಜೀವನವನ್ನು ರೂಪಿಸುವ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರ ಬಗ್ಗೆ ಗೌರವವನ್ನು ಇಟ್ಟುಕೊಂಡು ಪ್ರೋತ್ಸಾಹಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು’ ಎಂದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಜಿ.ಎಂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ. ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಮಕ್ಕಳು ಪರಿಪಕ್ವ ಹೊಂದುತ್ತಾರೆ. ಇದರಿಂದ ಅವರ ಜೀವನವು ಉಜ್ವಲವಾಗುತ್ತದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳು ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದರು.
ಪ್ರಾಂಶುಪಾಲ ಬ್ರಹ್ಮಾಚಾರಿ ಕೆ.ಎನ್, ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಜಿ.ಎಂ ಗ್ಲೋಬಲ್ ಸ್ಕೂಲ್ನ ಪ್ರಾಂಶುಪಾಲ ಪ್ರಣವ್ ಶೆಟ್ಟಿ, ಶಾಲಾ ಸ್ಥಾಪಕ ಪ್ರಾಂಶುಪಾಲ ಎನ್.ಎಸ್.ಅಡಿಗ, ಸಂಸ್ಥೆಯ ಕೌನ್ಸಿಲರ್ ಪ್ರಶಾಂತ್ ಕುಮಾರ್, ಪೋಷಕವೃಂದ, ಶಿಕ್ಷಕವೃಂದ ಇದ್ದರು.