ಪಡುಬಿದ್ರಿ: ಮುಂಬೈಯಲ್ಲಿ ಹೋಟೆಲ್ ಕಾರ್ಮಿಕರಾಗಿದ್ದು, ಲಾಕ್ಡೌನ್ನಿಂದ ಬಾಕಿಯಾಗಿದ್ದ ಕರಾವಳಿಯ ಐವರು ಕಾರು ಮೂಲಕ ಉಡುಪಿಗೆ ಸೋಮವಾರ ತಲುಪಿದ್ದು, ದಕ್ಷಿಣ ಕನ್ನಡದ ಮೂವರು ಕ್ವಾರಂಟೈನ್ಗಾಗಿ ರಾತ್ರಿಯಿಡೀ ಅಲೆದಾಡಿದ ಘಟನೆ ನಡೆದಿದೆ.
ಇಬ್ಬರು ಉಡುಪಿ ಜಿಲ್ಲೆಯವರಾಗಿದ್ದು, ಮೂವರು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಾಗಿದ್ದರು. ಉಡುಪಿಗೆ ಪಾಸ್ ಮಾಡಿಕೊಂಡು ಕಾರಿನಲ್ಲಿ ಸೋಮವಾರ ಉಡುಪಿ ತಲುಪಿದರು. ಉಡುಪಿಯ ಇಬ್ಬರಿಗೆ ಉಡುಪಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಮೂವರನ್ನು ಮಂಗಳೂರಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದರು. ಅದರಂತೆ ಮಂಗಳೂರಿಗೆ ತೆರಳಿ ಕ್ವಾರಂಟೈನ್ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು. ಉಡುಪಿಗೆ ಪಾಸ್ ಮಾಡಿರುವುದರಿಂದ ಉಡುಪಿಗೆ ತೆರಳುವಂತೆ ಅಧಿಕಾರಿಗಳು ತಿಳಿಸಿದರು. ಅತ್ತ ಇತ್ತ ಅಲೆದಾಡಿದ ಇವರು ರಾತ್ರಿ ಇಡೀ ಕಾರಿನಲ್ಲೇ ಕಳೆದರು.
ಇವರಿಗೆ ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯ ಹಸನ್ ಕಂಚಿನಡ್ಕ ಊಟ ಉಪಾಹಾರದ ವ್ಯವಸ್ಥೆಯನ್ನು ಮಾಡಿದರು. ಮಂಗಳವಾರ ತಪಾಸಣೆ ಕೇಂದ್ರದಲ್ಲಿ ಮತ್ತೆ ಉಡುಪಿ ತೆರಳುವಂತೆ ಅವರಿಗೆ ಸೂಚಿಸಲಾಯಿತು. ಮೂವರು ಕೊನೆಗೆ ಬೇರೆ ದಾರಿ ಕಾಣದೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ.