ಉಡುಪಿ: ಪೊಲೀಸರ ಸೋಗಿನಲ್ಲಿ ಬಂದ ವಂಚಕರು ವೃದ್ಧರಾದ ವಿಠಲಶೆಟ್ಟಿ ಅವರನ್ನು ವಂಚಿಸಿ ಲಕ್ಷಾಂತರ ರೂಪಾಯಿ ಚಿನ್ನಾಭರವಣವನ್ನು ದೋಚಿ ಪರಾರಿಯಾಗಿದ್ದಾರೆ.
ಬ್ರಹ್ಮಾವರದ ಬೈಕಾಡಿಯ ವಿಠಲ ಶೆಟ್ಟಿ (72) ಬುಧವಾರ ಕೃಷ್ಣಮಠದ ಸಮೀಪದಲ್ಲಿರುವ ರಾಘವೇಂದ್ರ ಮಠದ ಎದುರು ನಡೆದುಕೊಂಡು ಹೋಗುವಾಗ, ಬೈಕ್ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿದ್ದಾರೆ. ಬಳಿಕ ಪೊಲೀಸ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡು ನಂಬಿಕೆ ಬರುವಂತೆ ನಟಿಸಿದ್ದಾರೆ.
ಕಳ್ಳರ ಹಾವಳಿಯಿದ್ದು ಚಿನ್ನದ ಉಂಗುರ ಮತ್ತು ಚೈನನ್ನು ಬಿಚ್ಚಿಕೊಡಿ, ಟವೆಲ್ನಲ್ಲಿ ಜೋಪಾನವಾಗಿ ಕಟ್ಟಿ ಕೊಡುತ್ತೇವೆ ಎಂದು ನಂಬಿಸಿ ವಿಠಲ ಶೆಟ್ಟಿ ಅವರಿಂದ ಒಂದು ಚಿನ್ನದ ಸರ 2 ಉಂಗುರ ಪಡೆದಿದ್ದಾರೆ.
ಬಳಿಕ ಚಿನ್ನವನ್ನು ಟವೆಲ್ನಲ್ಲಿ ಭದ್ರವಾಗಿರಿಸಲಾಗಿದೆ ಎಂದು ನಂಬಿಸಿ ಟವೆಲ್ ಕೊಟ್ಟು ಚಿನ್ನವನ್ನು ಜೇಬಿಗಿಳಿಸಿ ಪರಾರಿಯಾಗಿದ್ದಾರೆ. ಬಳಿಕ ಟವೆಲ್ ಬಿಚ್ಚಿ ನೋಡಿದಾಗ ವಂಚನೆ ನಡೆದಿರುವುದು ಗಮನಕ್ಕೆ ಬಂದಿದೆ. ಕಳುವಾದ ಚಿನ್ನ ₹1.25ಲಕ್ಷ ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.