ಉಡುಪಿ:ಶಾಸಕ ಸಿ.ಟಿ.ರವಿ ಕಾರು ಅಪಘಾತ ಪ್ರಕರಣದಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದುವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸಿ.ಟಿ.ರವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರಾತ್ರಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಅಪಘಾತವಾಗಿದೆ. ಈ ಸಂದರ್ಭ ಕಾರಿನ ಹಿಂದಿನ ಸೀಟಿನಲ್ಲಿ ಮಲಗಿದ್ದೆ ಎಂದು ರವಿ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಅವರು ನಿರಾಪರಾಧಿ’ ಎಂದರು.
ಸಿ.ಟಿ.ರವಿ ಅವರನ್ನು ಚೆನ್ನಾಗಿ ಬಲ್ಲೆ. ಕುಡಿತ ಸೇರಿದಂತೆ ಯಾವುದೇ ದುರಭ್ಯಾಸಗಳು ಅವರೊಂದಿಗಿನ ಸ್ನೇಹದಲ್ಲಿ ಅರಿವಿಗೆ ಬಂದಿಲ್ಲ ಎಂದು ಯು.ಟಿ.ಖಾದರ್ ಅವರೇ ಹೇಳಿದ್ದಾರೆ. ಆದರೂ ಅಪಘಾತ ಪ್ರಕರಣವನ್ನು ರಾಜಕೀಯ ಕಾರಣಕ್ಕೆ ವೈಭವೀಕರಿಸುತ್ತಿರುವ ಕಾಂಗ್ರೆಸ್ನ ನಡತೆ ಆಘಾತ ಹಾಗೂ ನೋವುಂಟು ಮಾಡಿದೆ ಎಂದರು.
ಅಪಘಾತ ಪ್ರಕರಣವನ್ನು ಮೇಲ್ನೋಟಕ್ಕೆ ಗಮನಿಸಿದರೆ ಸಿ.ಟಿ.ರವಿ ಕಾರು ಚಾಲನೆ ಮಾಡುತ್ತಿರಲಿಲ್ಲ ಎಂಬುದು ತಿಳಿಯುತ್ತದೆ. ಕಾಂಗ್ರೆಸ್ ಮಾಡುತ್ತಿರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರ. ರವಿ ಅವರ ತೇಜೋವಧೆ ಮಾಡುವುದು ಅತ್ಯಂತ ಖಂಡನೀಯ ಎಂದು ಹೇಳಿದರು.