ಉಡುಪಿ: ಹಣಪಡೆದು ಅಕ್ರಮವಾಗಿ ಗೋವುಗಳನ್ನು ಸಾಗಿಸಲು ನೆರವು ನೀಡುತ್ತಿದ್ದ 6 ಮಂದಿ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಲ್ಪೆಯ ಕರಾವಳಿ ಕಾವಲು ಪಡೆಯ ಸಂತೋಷ್ ಶೆಟ್ಟಿ ಹಾಗೂ ಉತ್ತರ ಕನ್ನಡದ ಮಂಕಿ ಪೊಲೀಸ್ ಠಾಣೆಯ ವಿನೋದ್ ಗೌಡ ಎಂಬುವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರು ಸಿಬ್ಬಂದಿಗಳಾದ ಎಆರ್ಎಸ್ಯ ಬಾಲಸುಬ್ರಹ್ಮಣ್ಯ, ಎಎಚ್ಸಿ ಪ್ರಶಾಂತ್, ಚಂದ್ರಶೇಖರ್, ಹೆಡ್ ಕಾನ್ಸ್ಟೆಬಲ್ ರಾಘವೇಂದ್ರ ಎಂಬುವರು ತಲೆಮರೆಸಿಕೊಂಡಿದ್ದ ಬಂಧನಕ್ಕೆ ಶೋಧ ನಡೆಯುತ್ತಿದೆ.
ಪ್ರಕರಣದಲ್ಲಿ ಭಾಗಿಯಾದ ಎಲ್ಲ ಸಿಬ್ಬಂದಿಯನ್ನೂ ಅಮಾನತು ಮಾಡಲಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?
ಈಚೆಗೆ ಕೋಟ ಠಾಣೆಯ ಪಿಎಸ್ಐ ಸಾಸ್ತಾನ ಟೋಲ್ಗೇಟ್ ಬಳಿ ದಾಳಿ ನಡೆಸಿ ರಾಜಸ್ತಾನ ನೋಂದಣಿಯ 12 ಚಕ್ರದ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಅದರಲ್ಲಿ 13 ಕೋಣ, 7 ಎಮ್ಮೆ ಪತ್ತೆಯಾಗಿತ್ತು. ಜತೆಗೆ, ಲಾರಿಗೆ ಬೆಂಗಾವಲಾಗಿ ಮುಂದೆ ಹೋಗುತ್ತಿದ್ದ ಇಂಡಿಕಾ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ವಾಹನಗಳಲ್ಲಿದ್ದ 6 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಹೆಚ್ಚಿನ ತನಿಖೆಗೆ ನಾಲ್ವರು ಆರೋಪಿಗಳನ್ನು ಪೊಲೀಸರ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ಅಕ್ರಮವಾಗಿ ದನಗಳನ್ನು ಸಾಗಿಸಲು ಇಲಾಖೆಯ 6 ಸಿಬ್ಬಂದಿ ಹಣಪಡೆದು ನೆರವು ನೀಡುತ್ತಿದ್ದ ಅಂಶ ಬಯಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಆರೋಪಿಗಳ ಮಾಹಿತಿ ಆಧಾರದ ಮೇಲೆ ಇಬ್ಬರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ನಾಲ್ವರಿಗೆ ಶೋಧ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.
ಪೊಲೀಸರು ಪ್ರಕರಣದಲ್ಲಿ ಶಾಮೀಲಾಗಿರುವುದು ಬೇಸರದ ಸಂಗತಿ. ಆದರೆ, ಪ್ರಕರಣವನ್ನು ಬಯಲಿಗೆಳೆದಿರುವುದು ಕೂಡ ಪೊಲೀಸರೇ ಎನ್ನುವುದು ಶ್ಲಾಘನೀಯ. ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಲಿದೆ ಎಂದರು.