ಉಡುಪಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಚರಿಕೆಯ ಗಂಟೆ ಎಂದು ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿ ಹೇಳಿದರು.
ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಬಗ್ಗೆ ಮೊದಲಿದ್ದ ನಿರೀಕ್ಷೆಗಳು ಈಗ ಜನರಲ್ಲಿ ಕಾಣುತ್ತಿಲ್ಲ. ದೇಶದಲ್ಲಿ ನಿರೀಕ್ಷೆಯಷ್ಟು ಕೆಲಸಗಳು ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೋದಿ ಆರ್ಥಿಕ ಸುಧಾರಣೆಗೆ ಹಾಗೂ ರಾಮಮಂದಿರ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಹಿಂದೂ ಮತದಾರರ ಉತ್ಸಾಹ ಹೆಚ್ಚಲಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಕಲವಾಗಲಿದೆ ಎಂದು ಶ್ರೀಗಳು ಸಲಹೆ ನೀಡಿದರು.
ಎನ್ಡಿಎ ಮೈತ್ರಿಕೂಟವನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣ ನಿರ್ಧಾರದಿಂದ ಹಿಂದೆ ಸರಿಯಲೂಬಹುದು. ಈ ವಿಚಾರವಾಗಿ ಸಮಾನ ವಿಚಾರಧಾರೆಗಳಿರುವ ಮಿತ್ರಪಕ್ಷಗಳ ಜತೆ ಉತ್ತಮ ಬಾಂಧವ್ಯ ಹೊಂದುವುದು ಅವಶ್ಯ ಎಂದು ಪೇಜಾವರ ಶ್ರೀಗಳು ಕಿವಿಮಾತು ಹೇಳಿದರು.
ಮೋದಿಯವರೇ ಮುಂದಿನ ಪ್ರಧಾನಿಯಾಗಬೇಕು. ಯೋಗಿ ಆದಿತ್ಯನಾಥ್ ಮೋದಿಯವರಷ್ಟು ಸಮರ್ಥರಲ್ಲ. ಯೋಗಿ ರಾಜಕಾರಣಿಯಲ್ಲ; ಸಂತ ಎಂದು ಹೇಳಿದರು.
ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ವಿರೋಧ ಕಟ್ಟಿಕೊಂಡರೆ ಬಿಜೆಪಿಗೆ ನಷ್ಟವಾಗಲಿದೆ. ಈ ವಿಚಾರದಲ್ಲಿ ಹಿಂದೆ, ವಾಜಪೇಯಿ ಅವರು ಅನುಸರಿಸಿದ ರಾಜಕೀಯ ನೀತಿಯನ್ನು ಅನುಸರಿಸಬೇಕು ಎಂದರು.