ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ನೀರಿನ ಸಮಸ್ಯೆ ಉಲ್ಭಣ: ಜಿಲ್ಲಾಧಿಕಾರಿಗಳೇ ಟ್ಯಾಂಕರ್ ನೀರು ಕೊಡಿ

ಅಸಮರ್ಪಕ ನೀರು ನಿರ್ವಹಣೆ ಸಮಸ್ಯೆಗೆ ಕಾರಣ: ಶಾಸಕ ರಘುಪತಿ ಭಟ್‌
Last Updated 7 ಮೇ 2019, 14:03 IST
ಅಕ್ಷರ ಗಾತ್ರ

ಉಡುಪಿ: ಬಜೆ ಅಣೆಕಟ್ಟೆಯ ನೀರನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ನಗರದಲ್ಲಿ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ತಕ್ಷಣ ಜಿಲ್ಲಾಡಳಿತ ಟ್ಯಾಂಕರ್ ನೀರು ಪೂರೈಸಬೇಕು ಎಂದು ಶಾಸಕ ರಘುಪತಿ ಭಟ್‌ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಯಾಗಿ ನೀರು ನಿರ್ವಹಣೆ ಮಾಡಿದ್ದರೆ ಬಜೆ ಅಣೆಕಟ್ಟೆಯ ನೀರು ಕನಿಷ್ಠ ಮುಂದಿನ 40 ದಿನಗಳಿಗೆ ಸಾಲುತ್ತಿತ್ತು. ಈಗ ಪರಿಸ್ಥಿತಿ ಬಿಗಡಾಯಿಸಿದೆ. ಮಳೆ ಬರುವವರೆಗೂ ಟ್ಯಾಂಕರ್ ಮೂಲಕ ನೀರು ಕೊಡುವುದು ಉಳಿದಿರುವ ಏಕೈಕ ಮಾರ್ಗ ಎಂದರು.

ಪ್ರತಿ ವರ್ಷ ಫೆಬ್ರುವರಿ, ಮಾರ್ಚ್‌ನಲ್ಲಿ ಟ್ಯಾಂಕರ್ ನೀರು ಕೊಡಲಾಗುತ್ತಿತ್ತು. ಈ ವರ್ಷ ಮೇ ಆರಂಭವಾದರೂ ಟ್ಯಾಂಕರ್ ನೀರು ಕೊಟ್ಟಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ ನಗರಸಭೆ ಅಧಿಕಾರಿಗಳು ಟೆಂಡರ್‌ ಸಂಬಂಧಿತ ಫೈಲ್‌ ನೀಡಿಲ್ಲ ಎನ್ನುತ್ತಾರೆ. ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಮೊದಲು ಡ್ರಜಿಂಗ್ ಮೂಲಕ ನೀರು ಪಂಪ್‌ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿರುವುದಾಗಿ ಹೇಳುತ್ತಿದ್ದಾರೆ. ಯಾರ ಮಾತನ್ನು ನಂಬುವುದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2 ತಿಂಗಳ ಹಿಂದೆಯೇ ಶಿರೂರು ಮಠ, ಮಾಣಯ್ಯ ಬ್ರಿಜ್‌, ಭಂಡಾರಿ ಗುಂಡಿ, ಪುತ್ತಿಗೆ ಮಠದ ಬೃಹತ್ ಗುಂಡಿಗಳಲ್ಲಿ ಸಂಗ್ರಹವಾಗಿರುವ ನೀರನ್ನು ಪಂಪಿಂಗ್ ಮಾಡಿದ್ದರೆ ಕನಿಷ್ಠ ಹೆಚ್ಚುವರಿಯಾಗಿ 25 ದಿನ ನೀರು ಕೊಡಬಹುದಿತ್ತು. ಸಮಸ್ಯೆ ಉಲ್ಬಣಗೊಂಡ ಬಳಿಕ ನಗರಸಭೆ ಎಚ್ಚೆತ್ತುಕೊಂಡಿದೆ ಎಂದು ಟೀಕಿಸಿದರು.

ನೀರು ಪಂಪ್‌ ಮಾಡಲು 2 ತಿಂಗಳ ಹಿಂದೆಯೇ ಟೆಂಡರ್ ಕರೆಯಲಾಗಿದ್ದರೂ ಒಪ್ಪಿಗೆ ಸಿಕ್ಕಿರಲಿಲ್ಲ. ನಗರಸಭೆ ಅಧಿಕಾರಿಗಳನ್ನು ಕೇಳಿದರೆ ಡಿಸಿಯತ್ತ ಬೊಟ್ಟು ಮಾಡುತ್ತಾರೆ. ಜಿಲ್ಲಾಡಳಿತವನ್ನು ಕೇಳಿದರೆ ಅಧಿಕಾರಿಗಳು ಕಾರಣ ಎನ್ನುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀತಿ ಸಂಹಿತೆಯನ್ನು ಪಕ್ಕಕ್ಕಿಟ್ಟು ನಾಳೆಯಿಂದಲೇ ಟ್ಯಾಂಕರ್ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ನೀರಿನ ವಿಚಾರದಲ್ಲಿ ನಗರಸಭೆಯ ದುಡ್ಡು ಉಳಿಸುವ ಅಗತ್ಯವಿಲ್ಲ. ಸಮಸ್ಯೆ ಗಂಭೀರವಾದರೆ ನಾಗರಿಕರು ಹಿಡಿಶಾಪ ಹಾಕಲಿದ್ದಾರೆ ಎಂದು ರಘುಪತಿ ಭಟ್‌ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ಮಂಜುನಾಥ್ ಮಣಿಪಾಲ್‌, ಗಿರೀಶ್ ಅಂಚನ್‌, ಪ್ರಭಾಕರ್ ಪೂಜಾರಿ, ಬಾಲಕೃಷ್ಣ ಅವರೂ ಇದ್ದರು.

‘ನೆರೆ ನಿಯಂತ್ರಣಕ್ಕೆ ಸಿದ್ಧತೆ ಇಲ್ಲ‌’

ಮಳೆಗಾಲ ಸಮೀಪಿಸುತ್ತಿದ್ದರೂ ನೆರೆ ಪರಿಹಾರ ಕಾರ್ಯಗಳ ಸಿದ್ಧತೆ ನಡೆದಿಲ್ಲ. ಅಧಿಕಾರಿಗಳ ಸಭೆ ನಡೆಸಿಲ್ಲ. ಚರಂಡಿಗಳ ಹೂಳು ತೆಗೆಸಿಲ್ಲ. ನದಿ ಪಾತ್ರಗಳಲ್ಲಿ ಈ ಬಾರಿ ಮರಳು ತೆಗೆಯದ ಪರಿಣಾಮ ನೆರೆ ಬರುವುದು ಖಚಿತ. ನೆರೆ ಬಂದರೆ ಅದಕ್ಕೆ ಜಿಲ್ಲಾಡಳಿತವೇ ಕಾರಣ ಎಂದು ರಘುಪತಿ ಭಟ್‌ ಆರೋಪಿಸಿದರು.‌

ಜಿಲ್ಲೆಯಲ್ಲಿ ಮರಳು ತೆಗೆಯಲು ಸರ್ಕಾರ ಒಪ್ಪಿಗೆ ನೀಡಿದೆ. ಜಿಲ್ಲಾಡಳಿತ ತಕ್ಷಣ 7 ಸದಸ್ಯರ ಸಮಿತಿ ಸಭೆ ಕರೆದು ಅನುಮತಿ ನೀಡಬೇಕಿತ್ತು. ಬದಲಿಗೆ ಮೇ 14ಕ್ಕೆ ಸಭೆ ಕರೆಯಲು ನಿರ್ಧರಿಸಿದೆ. ಜನರ ಸಮಸ್ಯೆಗಳಿಗೆ ಕಾನೂನು ಚೌಕಟ್ಟು ಮೀರಿ ಸ್ಪಂದಿಸಿದ ಅಧಿಕಾರಿಗಳನ್ನು ಕಂಡಿದ್ದೇನೆ. ಆದರೆ, ಸಮಸ್ಯೆಯನ್ನು ಮತ್ತಷ್ಟು ಗಂಭೀರ ಮಾಡುವ ಅಧಿಕಾರಿಗಳನ್ನು ನೋಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳೆಗಾಗಿ ಪ್ರಾರ್ಥನೆ 10ಕ್ಕೆ

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳ ನೇತೃತ್ವದಲ್ಲಿ ಮೇ 10ರಂದು ಮಳೆಗಾಗಿ ಪ್ರಾರ್ಥಿಸಿ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಹಾಗೂ ಚಂದ್ರಮೌಳೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಅಂದು ನಗರಸಭೆಯ ಎಲ್ಲ ಸದಸ್ಯರು ಭಾಗವಹಿಸಲಿದ್ದಾರೆ. ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿಯೂ ಮಳೆಗಾಗಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಶಾಸಕ ರಘುಪತಿ ಭಟ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT