ಉಡುಪಿ: ಕ್ರೀಡಾಪಟುಗಳು ಸುಲಭವಾಗಿ ಸೋಲಪ್ಪಿಕೊಳ್ಳಬಾರದು. ಜಯಕ್ಕಾಗಿ ಕೊನೆಯವರೆಗೂ ಹೋರಾಟ ನಡೆಸಬೇಕು ಎಂದು ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ತೃಪ್ತಿ ಮುರ್ಗುಂಡೆ ಕಿವಿಮಾತು ಹೇಳಿದರು.
ಮಣಿಪಾಲದ ಮರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.
‘ಗೆಲ್ಲುವ ದೃಢವಿಶ್ವಾಸ ಹಾಗೂ ಕಠಿಣ ಶ್ರಮದೊಂದಿಗೆ ಸ್ಪರ್ಧಿಸಿದರೆ ಯಶಸ್ಸು ಸುಲಭವಾಗಿ ಸಿಗುತ್ತದೆ. ಗೆಲುವು ಸಿಗದಿದ್ದರೆ ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ಸೋಲನ್ನೂ ಸವಾಲಾಗಿ ಸ್ವೀಕರಿಸುತ್ತಾ ಹೋದರೆ ಕ್ರೀಡಾಪಟುಗಳು ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.
ಸುಲಭವಾಗಿ ಸೋಲೊಪ್ಪಿಕೊಳ್ಳಬಾರದು ಎಂಬ ಸೂತ್ರವೇ ಯಶಸ್ಸಿನ ಹಿಂದಿರುವ ಶಕ್ತಿ. ಕಾಮನ್ವೆಲ್ತ್ನಲ್ಲಿ ಕಂಚು ಹಾಗೂ ಐದು ಬಾರಿ ದಕ್ಷಿಣ ಏಷ್ಯಾ ಫೆಡರೇಷನ್ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲಲು ಇದು ಸಹಕಾರಿಯಾಯಿತು ಎಂದರು.
ಮಣಿಪಾಲ ವಿವಿ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ಮಾಹೆ ಕ್ರೀಡಾ ಸಮಿತಿ ಕಾರ್ಯದರ್ಶಿ ಡಾ.ವಿನೋದ್ ನಾಯಕ್, ಮಾಹೆ ಸಹ ಉಪ ಕುಲಪತಿ ಡಾ.ಪಿಎಲ್ಎನ್ಜಿ ರಾವ್, ಡಾ.ಪೂರ್ಣಿಮಾ ಬಾಳಿಗಾ, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಯಿತ್, ಡಾ.ಶೋಭಾ ಇದ್ದರು.