ಉಡುಪಿ: ದೈತ್ಯಗಾತ್ರದ ತಿಮಿಂಗಿಲದ ಕಳೆಬರ ಕುತ್ಪಾಡಿ ಸಮೀಪದ ಪಡುಕೆರೆ ಕಡಲತೀರದಲ್ಲಿ ಮಂಗಳವಾರ ಪತ್ತೆಯಾಯಿತು. ಬೃಹತ್ ಗಾತ್ರದ ಸುಮಾರು 20 ಅಡಿಗೂ ಉದ್ದವಿದ್ದ ತಿಮಿಂಗಿಲ ತೀರದಲ್ಲಿ ಬಿದ್ದಿದ್ದನ್ನು ನೋಡಿ ಸ್ಥಳೀಯರು ಆಶ್ಚರ್ಯಗೊಂಡರು.
ತೀರಕ್ಕೆ ಬರುವಾಗಲೇ ತಿಮಿಂಗಿಲ ಸಾವನ್ನಪ್ಪಿದ್ದರಿಂದ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಹಾಗೂ ಮೀನುಗಾರರು ಕಡಲ ತೀರದಲ್ಲಿಯೇ ಜೆಸಿಬಿ ಮೂಲಕ ದೊಡ್ಡ ಗುಂಡಿಯನ್ನು ತೋಡಿ ತಿಮಿಂಗಿಲವನ್ನು ಹೂಳಿದರು.
ಸಾಮಾನ್ಯವಾಗಿ ಸಮುದ್ರದಾಳದಲ್ಲಿ ಬದುಕುವ ತಿಮಿಂಗಿಲ ಆಹಾರ ಅರಸಿ ಆಗಾಗ ತೀರ ಪ್ರದೇಶದಲ್ಲಿ ಕಾಣಿಸಿಕೊಂಡು ಮರಳಿ ಸಮುದ್ರಕ್ಕೆ ಹೋಗಲಾರದೆ ಸಾಯುತ್ತವೆ. ಅನಾರೋಗ್ಯದಿಂದ ಅಸುನೀಗಿ ಸಮುದ್ರಕ್ಕೆ ಬಂದು ಬೀಳುತ್ತವೆ ಎಂದು ಸ್ಥಳೀಯ ಮೀನುಗಾರರು ಮಾಹಿತಿ ನೀಡಿದರು.