ಕುಂದಾಪುರ: ನಿಸ್ವಾರ್ಥ ಹಾಗೂ ಸೇವಾ ಮನೋಭಾವ ಇರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಉಡುಪಿಯ ಜಿ.ಶಂಕರ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿಗೆ ಸಮೀಪದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ನಲ್ಲಿ ಶನಿವಾರ ನಡೆದ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ 17ನೇ ವರ್ಷದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಪೋಷಕರು ಹಾಗೂ ಶಿಕ್ಷಕರು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಬಗ್ಗೆ ಸಕಾರಾತ್ಮಕ ಚಿಂತನೆ ಮಾಡಬೇಕು. ಮಕ್ಕಳನ್ನು ಅಂಕ ಗಳಿಸುವ ಗೆಲ್ಲುವ ಕುದುರೆಗಳನ್ನಾಗಿಸಬಾರದು. ಜನ್ಮಭೂಮಿ ಹಾಗೂ ಬೆಳೆಸಿದ ಸಮಾಜದ ಋಣ ತೀರಿಸುವ ಕೆಲಸ ನಿರಂತರವಾಗಿರಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ವಾತಾವರಣ ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಪ್ರೇರಣೆಯಾಗುತ್ತದೆ. ಅಂತಹ ಪಾರಂಪರಿಕ ಹಾಗೂ ವಾತ್ಸಲ್ಯಮಯ ಪರಿಸರ ಗುರುಕುಲ ವಿದ್ಯಾಸಂಸ್ಥೆಗಳಲ್ಲಿ ಇದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಂಡ್ಯ ಎಜುಕೇಷನಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿಗಳಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್ ಶೆಟ್ಟಿ, ಟ್ರಸ್ಟಿ ರಾಮ್ ಕಿಶನ್ ಹೆಗ್ಡೆ ಇದ್ದರು.
ಸಿಬಿಎಸ್ಸಿ ಪರೀಕ್ಷೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸಾಧನೆ ಮಾಡಿದ ಈಶಾ ಶೆಟ್ಟಿ ಹಾಗೂ ಶೈಕ್ಷಣಿಕ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಾರ್ಷಿಕ ಸಂಭ್ರಮದ ಅಂಗವಾಗಿ ನಡೆದ ‘ಕಲಾ ವೈಭೋಗಂ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿದರು.
ವಿದ್ಯಾರ್ಥಿ ನಾಯಕಿ ಶ್ರೇಯಾ ಜೆ. ಹೆಗ್ಡೆ ಸ್ವಾಗತಿಸಿದರು. ಶ್ರೀರಕ್ಷಾ ಪರಿಚಯಿಸಿದರು. ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಮೋಹನ್ ಕೆ ಹಾಗೂ ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅರುಣ್ ಡಿಸಿಲ್ವ ಶೈಕ್ಷಣಿಕ ವರದಿ ಮಂಡಿಸಿದರು. ಶಿಕ್ಷಕಿ ಸುಮನಾ ಪಿ ಪೈ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ಆಯುಷ್ ರಾವ್ ವಂದಿಸಿದರು. ರಿಶೀಕ್ ಎನ್. ಶೆಟ್ಟಿ ನಿರೂಪಿಸಿದರು.