ಉಡುಪಿ: ಜಿಲ್ಲೆಯಾದ್ಯಂತ ಮಂಗಳವಾರ ಸುರಿದ ಗುಡುಗು, ಸಿಡಿಲು ಸರಿಹ ಭಾರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿತು.
ಭಾರಿ ಮಳೆಗೆ ಭೈರಂಪಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ದೂಪದಕಟ್ಟೆಯ ಬಳಿಯ ರಸ್ತೆ ನೀರಿನಲ್ಲಿ ಕೊಚ್ಚಿಹೋಗಿದೆ. ತೋಡಿನ ನೀರು ರಭಸವಾಗಿ ನೀರು ರಸ್ತೆಗೆ ನುಗ್ಗಿದ ಪರಿಣಾಮ ಹಲವು ಮೀಟರ್ಗಳಷ್ಟು ರಸ್ತೆ ಹಾಳಾಗಿದೆ.
ಪೆರ್ಡೂರು ಹಾಗೂ ಹರಿಖಂಡಿಗೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಹರಿಖಂಡಿಗೆ ಗ್ರಾಮಕ್ಕೆ ವಾಹನಗಳ ಸಂಪರ್ಕ ಬಂದ್ ಆಗಿದೆ. ಪರಿಣಾಮ ಅಲ್ಲಿನ ಗ್ರಾಮಸ್ಥರು ತೀವ್ರ ಸಮಸ್ಯೆ ಅನುಭವಿಸುವಂತಾಯಿತು.
ಬೆಳೆ ನಾಶ:ನೆರೆ ಸೃಷ್ಟಿಯಾಗಿ ಕಟಾವಿಗೆ ಬಂದಿದ್ದ ಸುಮಾರು 40ಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ನಾಶವಾಗಿದೆ. ತೋಟಗಾರಿಕಾ ಪ್ರದೇಶಗಳಿಗೆ ನೀರು ನುಗ್ಗಿದ್ದು, ಹೆಚ್ಚಿನ ಹಾನಿ ಸಂಭವಿಸಿದೆ. ಜತೆಗೆ, ಹಲವು ಮನೆಗಳು ನೆರೆಯಿಂದ ಜಲಾವೃತಗೊಂಡಿವೆ.