ಉಡುಪಿ: ಉಡುಪಿ ಮತ್ತು ಕುಂದಾಪುರ ತಾಲ್ಲೂಕಿನಲ್ಲಿ ವಾಹನಗಳಿಗೆ ನಿಯಮಮೀರಿ ಕರ್ಕಶ ಹಾರ್ನ್ ಹಾಗೂ ಟಿಂಟ್ ಗಾಜುಗಳನ್ನು ಬಳುಸವ ಬಗ್ಗೆ ದೂರುಗಳಿದ್ದು, ಒಂದು ವಾರ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಶುಕ್ರವಾರ ಕಚೇರಿ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ಕಶ ಹಾರ್ನ್ ಹಾಗೂ ಟಿಂಟ್ ಗಾಜುಗಳ ಬಳಸದಂತೆ ಎಚ್ಚರಿಕೆ ನೀಡಿದ್ದರೂ ಕಡಿಮೆಯಾಗಿಲ್ಲ. ಹಾಗಾಗಿ, ವಿಶೇಷ ಕಾರ್ಯಾಚರಣೆ ನಡೆಸಿ ಮಾಲೀಕರಿಗೆ ದಂಡ ವಿಧಿಸುವ ಬದಲು ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಕೋರ್ಟ್ಗೆ ಹಾಜರು ಪಡಿಸಲಾಗುವುದು ಎಂದು ತಿಳಿಸಿದರು.
ಫೋನ್ ಕಾರ್ಯಕ್ರಮದಲ್ಲಿ ನಗರದಿಂದ ಸ್ಥಳೀಯರೊಬ್ಬರು ಕರೆ ಮಾಡಿ, ಸಂತೆಕಟ್ಟೆಯಲ್ಲಿ ಆಟೋ ಚಾಲಕರು ಮೀಟರ್ ಹಾಕುವುದಿಲ್ಲ. ಕನಿಷ್ಠ ದರ ₹ 25 ಇದ್ದರೂ ₹ 30 ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಎಸ್ಪಿ ಭರವಸೆ ನೀಡಿದರು.
ಕಾರ್ಕಳ ನಗರದ ಪ್ರಮುಖ ರಸ್ತೆ ಕಿರಿದಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ. ಪುರಸಭೆ ವ್ಯಾಪ್ತಿಯ ಅಂಗಡಿ ಮಾಲೀಕರು ಫುಟ್ಪಾತ್ನಲ್ಲಿ ವಸ್ತುಗಳನಿಟ್ಟು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಪಾದಚಾರಿಗಳಿಗೆನಡೆದಾಡಲು ಸಮಸ್ಯೆಯಾಗಿದೆ ಎಂದು ದೂರಿದರು.
ಮಣಿಪಾಲದಿಂದ ಮಲ್ಪೆಯವರೆಗೂ ರಸ್ತೆ ವಿಸ್ತರಣೆಯಾಗುತ್ತಿದೆ. ಇಂದ್ರಾಳಿ ಸಮೀಪದಲ್ಲಿ ರಸ್ತೆ ದಾಟಲು ಮಹಿಳೆಯರು, ಮಕ್ಕಳು, ವೃದ್ಧರಿಗೆ ಸಮಸ್ಯೆಯಾಗಿದ್ದು, ಸಂಚಾರ ಸಿಬ್ಬಂದಿಯನ್ನು ನಿಯೋಜಿಸಲು ಸಾರ್ವಜನಿಕರೊಬ್ಬರು ಮನವಿ ಮಾಡಿದರು. ಜತೆಗೆ ಪಾದಚಾರಿಗಳಿಗೆ ಫ್ಲೈಓವರ್ ವ್ಯವಸ್ಥೆಕಲ್ಪಿಸುವಂತೆ ಒತ್ತಾಯ ಮಾಡಲಾಯಿತು.
ಉದ್ಯಾವರ ಪಡುಕರೆಯ ಕಿರಿದಾದ ರಸ್ತೆಯಲ್ಲಿ ಕಲ್ಲು ಸಾಗಿಸುವ ವಾಹನಗಳನ್ನು ನಿಲುಗಡೆ ಮಾಡಲಾಗುತ್ತದೆ. ಇದರಿಂದಾಗಿ ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಮಸ್ಯೆಗೆ ಪರಿಹಾರ ಒದಗಿಸುವಂತೆನಾಗರಿಕರೊಬ್ಬರು ಮನವಿ ಮಾಡಿದರು.
ನಗರ ಬಸ್ ನಿಲ್ದಾಣದಲ್ಲಿ ಬಸ್ಗಳ ಹಾರ್ನ್ ಕಿರಿಕಿರಿ ಉಂಟುಮಾಡುತ್ತದೆ. ವೇಗವಾಗಿ ಬರುವ ಬಸ್ಗಳು ಪಾದಚಾರಿಗಳಲ್ಲಿ ಭೀತಿ ಹುಟ್ಟಿಸುತ್ತವೆ ಎಂದು ನಾಗರಿಕರೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಸಿಟಿ ಬಸ್ ಮಾಲೀಕರ ಸಂಘಕ್ಕೆ ನೋಟಿಸ್ ನೀಡಿ, ಸಂಚಾರ ನಿಯಮ ಪಾಲಿಸುವಂತೆ ಸೂಚಿಸಿ ಎಂದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಕುರಿತು ಹೆಚ್ಚಿನ ದೂರುಗಳು ಬರುತ್ತಿವೆ. ಅಗತ್ಯವಿರುವ ಕಡೆಗಳಲ್ಲಿ ಸಂಚಾರ ಪೊಲೀಸರ ನೇಮಕ ಹಾಗೂ ಸ್ಟೆಷಲ್ ಬೀಟ್ ಹಾಕಲಾಗುತ್ತದೆ ಎಂದು ಎಸ್ಪಿ ಲಕ್ಷ್ಮಣ ನಿಬಂರಗಿ ಭರವಸೆ ನೀಡಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ರಾತ್ರಿ ಸಂದರ್ಭ ವೇಶ್ಯಾವಾಟಿಕೆ ಹಾಗೂ ಕುಡುಕರ ಹಾವಳಿ ಹೆಚ್ಚಿರುವ ಕುರಿತು ಸ್ಥಳೀಯರೊಬ್ಬರು ಕರೆಮಾಡಿ ದೂರಿದರು. ಪ್ರತಿನಿತ್ಯ ಸಂಜೆ 5 ರಿಂದ 9ವರೆಗೆ ಕೆಎಸ್ಆರ್ಟಿಸಿ ಬಸ್ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಎಸ್ಪಿ ಸೂಚಿಸಿದರು.
ಬ್ರಹ್ಮಾವರ, ದೂಪದ ಕಟ್ಟೆ, ಪೆಟ್ರೋಲ್ ಬಂಕ್ ಬಳಿಯಲ್ಲಿ ದ್ವಿಚಕ್ರ ಹಾಗೂ ಕಾರುಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತವೆ. ಬೇಳೂರು ಕೋಟ ಠಾಣಾ ವ್ಯಾಪ್ತಿಯಲ್ಲಿ 15 ದಿನಗಳ ಹಿಂದೆ ಕಳವು ಪ್ರಯತ್ನ ನಡೆದಿದೆ. ಕಲ್ಲು ಗಣಿಗಾರಿಕೆ, ಉಡುಪಿ ಕುಂದಾಪುರದಲ್ಲಿ ಮೀನು ಲಾರಿ ನೀರು ರಸ್ತೆಯಲ್ಲಿ ಬೀಳುತ್ತಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿರುವ ಕುರಿತು, ಕಾರ್ಕಳ ವೆಂಕಟರಮಣ ದೇವಸ್ಥಾನದ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಮನವಿ ಮಾಡಲಾಯಿತು. ಕೋರ್ಟ್ ರೋಡ್ ಹಿಂದಿ ರಸ್ತೆಗಳಲ್ಲಿ ಗ್ಯಾರೇಜ್ ವಾಹನಗಳನ್ನು ರಸ್ತೆ ಮೇಲೆ ನಿಲುಗಡೆ ಸೇರಿದಂತೆ ಒಟ್ಟು 22 ಕರೆಗಳು ಬಂದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.