ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಸಾರ ವಿವರಣೆ, ಪ್ರದರ್ಶನ ರಂಗಭೂಮಿಯ ಉದ್ದೇಶ- ರಂಗ ನಿರ್ದೇಶಕ ಎಸ್.ರಘುನಂದನ

Last Updated 13 ಏಪ್ರಿಲ್ 2022, 15:48 IST
ಅಕ್ಷರ ಗಾತ್ರ

ಉಡುಪಿ: ಜೀವನದ ಸಾರವನ್ನು ವಿವರಿಸುವುದು ಹಾಗೂ ಪ್ರದರ್ಶಿಸುವುದು ರಂಗಭೂಮಿಯ ಉದ್ದೇಶವಾಗಿದೆ. ಕೇವಲ ಜೀವನದ ಅನುಕರಣೆ ಮಾತ್ರವಲ್ಲ, ಅದನ್ನೂ ಮೀರಿದ್ದು ಎಂದು ಬೆಂಗಳೂರಿನ ಹಿರಿಯ ರಂಗ ನಿರ್ದೇಶಕ ಎಸ್.ರಘುನಂದನ ಹೇಳಿದರು.

ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ಈಚೆಗೆ ‘ನಾಟ್ ಫೇಕ್, ನಾಟ್ ರಿಯಲ್: ರಂಗ ನಟನೆ ಮತ್ತು ರಂಗಭೂಮಿಯ ಸತ್ಯಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ನಟನೆ ಖಂಡಿತವಾಗಿಯೂ 'ನಕಲಿ' ಅಲ್ಲ. ಅದು ವಾಸ್ತವದ ಸರಳ ತಿಳಿವಳಿಕೆಯನ್ನು ಮೀರಿದೆ. ಜೀವನಕ್ಕಿಂತ ಹೆಚ್ಚಾಗಿ ಜೀವನದ ಸಾರವನ್ನು ರೂಪಿಸಲು ಪ್ರಯತ್ನಿಸುತ್ತದೆ. ಸೌಂದರ್ಯಶಾಸ್ತ್ರದಲ್ಲಿ ನಾವು ಅದನ್ನೇ 'ರಸ' ಎಂದು ಕರೆದಿದ್ದೇವೆ ಎಂದರು.

ಜೀವನಾನುಭವವು ಸೌಂದರ್ಯದ ಸ್ಪರ್ಶದಿಂದ ರಂಗದಲ್ಲಿ ರಸ ವಾಗುತ್ತದೆ. ಜೀವನದಲ್ಲಿ ನೋಯುವವರ ಬಗ್ಗೆ ಸಹಾನುಭೂತಿ ಇಲ್ಲದೆ ಶ್ರೇಷ್ಠ ಕಲೆ ಹುಟ್ಟಲು ಸಾಧ್ಯವಿಲ್ಲ. ಆ ಅರ್ಥದಲ್ಲಿ ರಂಗಭೂಮಿಯು ಜೀವನದ ಅನುಕರಣೆಯನ್ನು ಮೀರಿ ಜೀವನದ ವ್ಯಾಖ್ಯಾನವಾಗುತ್ತದೆ. ರಂಗಭೂಮಿ, ಅಥವಾ ಯಾವುದೇ ಕಲೆ, ಕರುಣ, ಅದ್ಭುತ, ಶೃಂಗಾರ ಸೇರಿದಂತೆ ವೀಕ್ಷಕರಲ್ಲಿ ರಸಾನುಭವವನ್ನು ಪ್ರಚೋದಿಸುವ ಪ್ರಕ್ರಿಯೆ ಎಂದರು.

ಯಾರೊಬ್ಬರ ಅನುಭವವನ್ನು ಸಂಪೂರ್ಣವಾಗಿ ಸ್ವಂತವಾಗಿ ಅನುಭವಿಸಲು ಸಾಧ್ಯವಾಗದು. ಆದರೆ, ಕಲೆ ನಕಲಿ ಅಲ್ಲ, ಅದು ಕಲಾತ್ಮಕ ವಾಸ್ತವ. ರಂಗಭೂಮಿಯು ವಿವಿಧ ಕಲಾ ಸಾಧನಗಳನ್ನು ಉಪಯೋಗಿಸಿಕೊಂಡು ಜೀವನದ ಸತ್ಯವನ್ನು ಹೇಳುತ್ತದೆ ಎಂದು ರಘುನಂದನ ಹೇಳಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸ್ವಾಗತಿಸಿ, ಪರಿಸರಶಾಸ್ತ್ರ, ಸೌಂದರ್ಯಶಾಸ್ತ್ರ, ಶಾಂತಿ ಅಧ್ಯಯನ ಮತ್ತು ಕಲಾ ಮಾಧ್ಯಮಗಳು ಜಿಸಿಪಿಎಎಸ್‌ನಲ್ಲಿನ ಅಧ್ಯಯನ ವಿಷಯಗಳ ಸತ್ವ ಎಂದು ಹೇಳಿದರು.

ಧನ್ಯವಾದ ಸಮರ್ಪಸಿದ ಪ್ರೊ.ಫಣಿರಾಜ್, ಇತರರು ಮೌನ ವಹಿಸಿದಾಗಲೂ ಕಲಾವಿದರು ಸಮಕಾಲೀನ ಬಿಕ್ಕಟ್ಟುಗಳಿಗೆ ಸ್ಪಂದಿಸಿದ್ದಾರೆ ಎಂದರು. ರಂಗ ನಿರ್ದೇಶಕ ರಘುನಂದನ ಅವರು ಜಿಸಿಪಿಎಎಸ್‌ ವಿದ್ಯಾರ್ಥಿಗಳಿಗೆ ರಂಗಭೂಮಿಯ ಕುರಿತು ಎರಡು ದಿನಗಳ ವಿಶೇಷ ಕಮ್ಮಟ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT