ಉಡುಪಿ: ಐಎಂಎ ಕಂಪೆನಿಯ ವಂಚನೆ ಜಾಲ ಉಡುಪಿ ಜಿಲ್ಲೆಗೂ ಹರಡಿದೆ. ಕೆಮ್ಮಣ್ಣು ಬಳಿಯ ತೋನ್ಸೆ ನಿವಾಸಿ ಎಸ್.ಕೆ.ನಾಹಿದಾ ಅವರು ₹ 51 ಸಾವಿರ ಬಂಡವಾಳ ಹೂಡಿ ವಂಚನೆಗೊಳಗಾಗಿದ್ದು, ಸೆನ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.
ಹಣ ಹೂಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂಬ ಸಂಬಂಧಿಕರ ಸಲಹೆ ಮೇರೆಗೆ ನಾಹಿದಾ ಡಿಸೆಂಬರ್ 31ರಂದು ₹ 1000 ಷೇರು ಬಂಡವಾಳ ಹಾಗೂ ₹50000 ನಗದನ್ನು ನೆಫ್ಟ್ ಮೂಲಕ ಐಎಂಎ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದರು.
ಜನವರಿಯಲ್ಲಿ ₹ 1250 ಹಾಗೂ ಫೆಬ್ರುವರಿಯಲ್ಲಿ ₹ 1278 ಲಾಭಾಂಶ ನೀಡಿದ್ದ ಕಂಪೆನಿ ಬಳಿಕ ಲಾಭಾಂಶ ನೀಡಿರಲಿಲ್ಲ. ಈ ಸಂಬಂಧ ಕಂಪೆನಿಯ ಸಿಇಒ ಮನ್ಸೂರ್ ಖಾನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿದ್ದಾರೆ.