ಉಡುಪಿ: ಬಾರ್ಕೂರಿನಲ್ಲಿ ಶುಕ್ರವಾರ ರಾತ್ರಿ ಆಳುಪೋತ್ಸವ ಮುಗಿಸಿಕೊಂಡು ಉಡುಪಿಗೆ ಮರಳುವಾಗ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ದಾರಿಮಧ್ಯೆ ಕಂಡ ಯಕ್ಷಗಾನಕ್ಕೆ ಮರುಳಾದರು.
ಬಾರ್ಕೂರಿನಿಂದ ಬ್ರಹ್ಮಾವರ ಮಾರ್ಗದ ಸೇತುವೆ ಸಮೀಪದ ಕಾರನ್ನು ನಿಲ್ಲಿಸಿ ಗದ್ದೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಸ್ಥಳಕ್ಕೆ ತೆರಳಿದ ಸಚಿವರುಸಾಮಾನ್ಯರಂತೆ ಕುಳಿತು ಯಕ್ಷಗಾನದ ಸೊಬಗನ್ನು ಕಣ್ತುಂಬಿಕೊಂಡರು.
ಸಚಿವರ ಅನಿರೀಕ್ಷಿತವಾಗಿ ಭೇಟಿಯಿಂದ ಗ್ರಾಮಸ್ಥರು ಸಂತಸಗೊಂಡರು. ಬಳಿಕ ಸಚಿವರು ಸ್ಥಳೀಯರೊಂದಿಗೆ ಕುಳಿತು ಹಾಲಾಡಿ ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ‘ಶ್ರೀಕೃಷ್ಣಾರ್ಜುನ’ ಯಕ್ಷಗಾನ ಪ್ರಸಂಗವನ್ನು ಒಂದೂವರೆ ತಾಸು ವೀಕ್ಷಣೆ ಮಾಡಿದರು.
ಬಳಿಕ ಪ್ರಸಂಗದ ಮಧ್ಯಂತರದಲ್ಲಿ ಜಯಮಾಲಾ ಅವರನ್ನು ವೇದಿಕೆಗೆ ಆಹ್ವಾನಿಸಿದ ಕಲಾವಿದರು ಹಾಗೂ ಯಕ್ಷಗಾನ ಮಂಡಳಿ ಸದಸ್ಯರು ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಬಾಲ್ಯದಲ್ಲಿ ಪೋಷಕರ ಜತೆ ನೆಲದಲ್ಲಿ ಕುಳಿತು ಯಕ್ಷಗಾನ ನೋಡುತ್ತಿದ್ದ ನೆನಪನ್ನು ಸಚಿವರು ಹಂಚಿಕೊಂಡರು.