ಉಡುಪಿ: ತುಳುನಾಡಿನ ಭೂತಾರಾಧನೆಗೆ ಜೀವನ ಸವೆಸಿ ಸೇವೆ ಸಲ್ಲಿಸುತ್ತಿರುವ ದೈವಾರಾಧಕರಿಗೆ ರಾಜ್ಯ ಸರ್ಕಾರ ಪಿಂಚಣಿ ನೀಡಬೇಕು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಆಗ್ರಹಿಸಿದರು.
ಮೂಡುಬೆಳ್ಳೆ ಕಾಡಬೆಟ್ಟು ಪಂಜುರ್ಲಿ ದೈವಸ್ಥಾನದ ವಠಾರದಲ್ಲಿ ಪಾಣಾರಾ ಯಾನೆ ನಲಿಕೆ ಸಮಾಜ ಸೇವಾ ಸಂಘ ಮತ್ತು ಗಾಂಧಿ ವಿಚಾರ ವೇದಿಕೆ ಆಯೋಜಿಸಿದ್ದ ಸನ್ಮತಿ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಂಧಿ ಹಂತಕರು ಮಹಾತ್ಮರಾಗುತ್ತಿರುವುದು ಆತಂಕಕಾರಿ ವಿಚಾರ. ದಲಿತ ಸಮುದಾಯಗಳಲ್ಲಿ ಐಕ್ಯತೆ, ಸೈದ್ಧಾಂತಿಕ ಜಾಗೃತಿಗಳು ಮೂಡಬೇಕಾಗಿದ್ದು, ಸಮುದಾಯ ಮತ್ತಷ್ಟು ಸದೃಢವಾಗಬೇಕು. ಆದರೆ, ದಲಿತ ಸಮುದಾಯಗಳು ವಿಘಟನೆಯತ್ತ ಮುಖಮಾಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ ಯುವಜನಾಂಗದಲ್ಲಿ ಕೀಳರಿಮೆ ಹೆಚ್ಚುತ್ತಿದ್ದು ಮತ್ತೊಬ್ಬರ ಜತೆ ಹೋಲಿಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಯುವಜನತೆ ಬದ್ಧತೆಯಿಂದ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ರಾಜು ಪಾಣರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಸಂತೋಷ್ ಕುಮಾರ್, ಕಸಾಪ ಕಾಪು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಗಾಂಧಿ ವಿಚಾರ ವೇದಿಕೆಯ ಉಡುಪಿ ಘಟಕದ ಅದ್ಯಕ್ಷೆ ಸೌಜನ್ಯ ಶೆಟ್ಟಿ ಇದ್ದರು. ಪತ್ರಕರ್ತ ಅಶ್ವಿನಿ ಲಾರೆನ್ಸ್ ಸ್ವಾಗತಿಸಿದರು. ಸುಧಾಕರ ಪಾಣಾರ ವಂದಿಸಿದರು.