ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಮಾರು ಮಠದಲ್ಲಿ ಕಟ್ಟಿಗೆ ಮುಹೂರ್ತ ಸಂಭ್ರಮ

ಜನವರಿಯಲ್ಲಿ ನಡೆಯಲಿರುವ ಮುಂದಿನ ಪರ್ಯಾಯಕ್ಕೆ ಪೂರ್ವಭಾವಿ ಸಿದ್ಧತೆ
Last Updated 4 ಜುಲೈ 2019, 13:55 IST
ಅಕ್ಷರ ಗಾತ್ರ

ಉಡುಪಿ: ಅದಮಾರು ಮಠದ ಮುಂದಿನ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಗುರುವಾರ ಕಟ್ಟಿಗೆ ಮುಹೂರ್ತ ನೆರವೇರಿತು.

ಬೆಳಿಗ್ಗೆ ಶುಭ ಮುಹೂರ್ತದಲ್ಲಿ ದೇವರ ಪ್ರಾರ್ಥನೆ, ನವಗ್ರಹ ಪೂಜೆ ನೆರವೇರಿತು. ಬಳಿಕ ರಥಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಯಿತು. ಜೋಡಿ ಎತ್ತುಗಳು ಮೆರವಣಿಗೆಯ ಸಾರಥ್ಯ ವಹಿಸಿ ಮುಂದೆ ಸಾಗುತ್ತಿದ್ದರೆ, ಭಕ್ತರು ದೇವರ ನಾಮಸ್ಮರಣೆ ಮಾಡುತ್ತಾ ಹೆಜ್ಜೆ ಹಾಕಿದರು. ಚಂಡೆ, ವಾದ್ಯಗಳ ನಾದ ಸಂಭ್ರಮವನ್ನು ಹೆಚ್ಚಿಸಿತು.

ರಥಬೀದಿಯಲ್ಲಿರುವ ಚಂದ್ರಮೌಳೇಶ್ವರ ಹಾಗೂಅನಂತೇಶ್ವರನ ಸನ್ನಿಧಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಶ್ರೀಕೃಷ್ಣಮಠದ ಕೃಷ್ಣದೇವರು, ಭಾಗೀರಥಿ ಹಾಗೂ ಭೋಜನ ಶಾಲೆಯ ಪ್ರಾಣ ದೇವರಿಗೆ ಪೂಜೆ ಮಾಡಲಾಯಿತು. ಬಳಿಕ ಮಧ್ವಾಚಾರ್ಯರ ಸನ್ನಿಧಾನಕ್ಕೆ ತೆರಳಿ ವಿಘ್ನಗಳು ಎದುರಾಗದದಂತೆ ಪ್ರಾರ್ಥಿಸಲಾಯಿತು ಎಂದು ಅದಮಾರು ಮಠದ ಶಿಬರೂರು ವಾಸುದೇವಾಚಾರ್ಯ ತಿಳಿಸಿದರು.

ಅಲ್ಲಿಂದ ನೇರವಾಗಿಅದಮಾರು ಮಠಕ್ಕೆ ಆಗಮಿಸಿ ಮುಹೂರ್ತದ ಕಟ್ಟಿಗೆಗಳನ್ನು ಮೆರವಣಿಗೆಯಲ್ಲಿ ಹೊತ್ತು ಸಾಗಿ ಧ್ವಸರೋವರದ ಈಶಾನ್ಯ ಭಾಗದಲ್ಲಿ ಕಟ್ಟಿಗೆಗಳನ್ನು ಇಡಲಾಯಿತು. ಭೂಮಿ ತಾಯಿ ಹಾಗೂ ಪರಶುರಾಮನಿಗೆ ಪೂಜೆ ಸಲ್ಲಿಸಿ, ಬೆಳಿಗ್ಗೆ 9.27ರ ಸಿಂಹಲಗ್ನದಲ್ಲಿ ಕಟ್ಟಿಗೆ ಮುಹೂರ್ತ ನೆರವೇರಿಸಲಾಯಿತು ಎಂದು ವಾಸುದೇವಾಚಾರ್ಯರು ಮಾಹಿತಿ ನೀಡಿದರು.

ಉಡುಪಿಯ ಕಟ್ಟಿಗೆ ರಥ ಬಹಳ ಪ್ರಸಿದ್ಧಿ.ಜನವರಿ 4ರಿಂದ 8ರ ಮಧ್ಯೆ ಪರ್ಯಾಯ ಶ್ರೀಗಳು ಸಂಚಾರ ಮುಗಿಸಿ ಪುರಪ್ರವೇಶಮಾಡುವ ಹೊತ್ತಿಗೆ ಕಟ್ಟಿಗೆ ರಥವನ್ನು ಸುಂದರವಾಗಿ ಅಲಂಕೃತಗೊಳಿಸಲಾಗುವುದು ಎಂದು ಆಚಾರ್ಯರು ತಿಳಿಸಿದರು.

ಅದಮಾರು ಮಠದ ಗೋವಿಂದರಾಜ ಹೆಗ್ಡೆ ಮಾತನಾಡಿ, ಅದಮಾರು ಮಠದ ಮುಂದಿನ ಪರ್ಯಾಯ 2020–22ರ ಅವಧಿಯಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಈಗಾಗಲೇ ಬಾಳೆಮುಹೂರ್ತ, ಅಕ್ಕಿಮುಹೂರ್ತ ನೆರವೇರಿದ್ದು, ಬುಧವಾರ ಕಟ್ಟಿಗೆ ಮುಹೂರ್ತ ನೆರವೇರಿದೆ ಎಂದು ತಿಳಿಸಿದರು.

ಅದಮಾರು ಮಠದ ವಿಶ್ವಪ್ರಿಯ ಶ್ರೀಗಳು ಹಾಗೂ ಈಶಪ್ರಿಯ ಶ್ರೀಗಳು ಬದರಿನಾಥದಲ್ಲಿ ದೇವರ ದರ್ಶನ ಪಡೆದು ವಾಪಾಸಾಗುತ್ತಿದ್ದು, ಅವರ ಆಜ್ಞಾನುಸಾರ ಕಟ್ಟಿಗೆ ಮುಹೂರ್ತ ನಡೆದಿದೆ ಎಂದರು.

ಅಷ್ಠಮಠಗಳಲ್ಲಿ ದೇವರಿಗೆ ಸಮರ್ಪಿಸುವ ನೈವೇದ್ಯ ಕಟ್ಟಿಗೆಯಲ್ಲಿ ತಯಾರಾಗುವ ಕಾರಣಕ್ಕೆ ಕಟ್ಟಿಗೆ ಮುಹೂರ್ತಕ್ಕೆ ವಿಶೇಷ ಪ್ರಾಮುಖ್ಯತೆ. ಪ್ರತಿ ಪರ್ಯಾಯದಲ್ಲಿ ವರ್ಷಕ್ಕೆ 25 ರಿಂದ 30 ಲಕ್ಷ ಭಕ್ತರು ಕೃಷ್ಣಮಠದಲ್ಲಿ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಇದಕ್ಕೂ ಕಟ್ಟಿಗೆಯನ್ನು ಬಳಸುವುದು ವಿಶೇಷ ಎಂದರು.

ಧಾರ್ಮಿಕ ವಿದ್ವಾಂಸರು, ಗಣ್ಯರು, ಉದ್ಯಮಿಗಳು, ಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನವೆಂಬರ್‌ನಲ್ಲಿ ಭತ್ತ ಮುಹೂರ್ತ ನೆರವೇರಲಿದ್ದು, ಪರ್ಯಾಯದ ಪೂರ್ವಭಾವಿ ವಿಧಿವಿಧಾನಗಳು ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.

ಈ ಸಂದರ್ಭ ಹಲವು ಗಣ್ಯರು, ಉದ್ಯಮಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT