ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ದೊಡ್ಡ ಕೆರೆಗಳನ್ನು ‘ಕೆರೆ ಸಂಜೀವಿನಿ ಯೋಜನೆ’ಯಡಿ ಹೂಳೆತ್ತಲು ಹಾಗೂ ಏತ ನೀರಾವರಿಯ ಮೂಲಕ ಕಿಂಡಿ ಅಣೆಕಟ್ಟೆಗಳ ಸುತ್ತಮುತ್ತಲಿನ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲು ಸರ್ಕಾರಿ ಭರವಸೆಗಳ ಸಮಿತಿ ಸಭೆ ನಿರ್ಧರಿಸಿದೆ ಎಂದು ಸಮಿತಿಯ ಅಧ್ಯಕ್ಷ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ನಡೆದ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ಬಾಕಿ ಇರುವ ಭರವಸೆಗಳ ಬಗ್ಗೆ ಚರ್ಚಿಸಲಾಯಿತು. ರಾಜ್ಯದಲ್ಲಿ ಕೆರೆಗಳ ಒತ್ತುವರಿ ತಡೆಯುವುದು, ಸರ್ಕಾರಿ ಯೋಜನೆಗಳಲ್ಲಿ ಕೆರೆ ಒತ್ತುವರಿಯಾದರೆ ಕೆರೆಯ ಪಕ್ಕದ ಜಾಗವನ್ನು ವಶಪಡಿಸಿಕೊಂಡು ಅದನ್ನು ಕೆರೆಗೆ ಸೇರಿಸಿ ಅಭಿವೃದ್ಧಿ ಪಡಿಸಲು ಕ್ರಮ ಜರಗಿಸುವುದಕ್ಕೆ ರಘುಪತಿ ಭಟ್ ಸಲಹೆ ನೀಡಿದರು.
ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಸಣ್ಣ ನೀರಾವರಿ ಇಲಾಖೆ (ದಕ್ಷಿಣ ವಲಯ) ಪ್ರಧಾನ ಎಂಜಿನಿಯರ್ ಎಚ್.ಎಲ್. ಪ್ರಸನ್ನ, ಸಣ್ಣ ನೀರಾವರಿ (ಉತ್ತರ ವಲಯ) ಮುಖ್ಯ ಎಂಜಿನಿಯರ್ ಜಿ.ಟಿ. ಸುರೇಶ್, ಮಂಗಳೂರು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಗೋಕುಲ್ ದಾಸ್ ಇದ್ದರು.