ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ | ಕೊರೊನಾ ತಡೆಗೆ ದೇಗುಲ ಸಿಬ್ಬಂದಿ

ಕ್ವಾರಂಟೈನ್‌ ಕೇಂದ್ರಗಳ ಸುವ್ಯವಸ್ಥಿತ ನಿರ್ವಹಣೆ ಸಭೆಯಲ್ಲಿ ಸಚಿವ
Last Updated 19 ಮೇ 2020, 14:21 IST
ಅಕ್ಷರ ಗಾತ್ರ

ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸೇರಿದಂತೆ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿನ ಸಿಬ್ಬಂದಿಯನ್ನು ಕೊರೊನಾ ನಿಯಂತ್ರಣ ಕಾರ್ಯಗಳಲ್ಲಿ ನಿಯೋಜನೆ ಮಾಡಲಾಗುತ್ತಿದೆ. ಆದರೆ 50 ವರ್ಷ ದಾಟಿದವರು, ಆರೋಗ್ಯ ಅಶಕ್ತರನ್ನು ನಿಯೋಜನೆ ಮಾಡದಂತೆ ಸ್ವಷ್ಟ ಸೂಚನೆ ನೀಡಲಾಗಿ‌ದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿಸಭಾಂಗಣದಲ್ಲಿ ಮಂಗಳವಾರ ಕೋವಿಡ್‌–19 ಹರಡದಂತೆ ತಡೆಯಲು ಪ್ರಾರಂಭಿಸಲಾದ ಕ್ವಾರಂಟೈನ್‌ ಕೇಂದ್ರಗಳ ನಿರ್ವಹಣೆಯ ಕುರಿತು ಅಧಿಕಾರಿಗಳ ಸಭೆ ನಡೆಸಿದರು.

ಕ್ವಾರಂಟೈನ್‌ ಕೇಂದ್ರಕ್ಕೆ ನೋಡಲ್‌ ಅಧಿಕಾರಿ ‘ಸರ್ಕಾರಿ ಕ್ವಾರಂಟೈನ್‌ ಕೇಂದ್ರಗಳಲ್ಲಿನ ವ್ಯವಸ್ಥೆಗಳು ಸರಿಯಾಗಿ ನಡೆಯಲು ಪ್ರತಿ ಕೇಂದ್ರಕ್ಕೆ ಒಬ್ಬರಂತೆ ನೋಡಲ್‌ ಅಧಿಕಾರಿಯನ್ನು ನೇಮಕ ಮಾಡಬೇಕು. ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಾದಲ್ಲಿ ಇತರ ಇಲಾಖೆಗಳಿಂದ ಸಿಬ್ಬಂದಿ ನಿಯೋಜನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಿಯಾಯಿತಿ ಇಲ್ಲ: ‘ಕ್ವಾರಂಟೈನ್‌ ನಿವಾಸಿಗಳಿಗೆ ಆಹಾರ ನೀಡುವಲ್ಲಿ ಲೋಪ ಆಗಿಲ್ಲ, ಸರಬರಾಜು ಮಾಡುವಲ್ಲಿ ಲೋಪ ಆಗಿದೆ. ಕ್ವಾರಂಟೈನ್‌ ಕೇಂದ್ರಗಳಿಗೆ ಬಂದವರ ಗಂಟಲು ದ್ರವಗಳನ್ನು ಕೂಡಲೇ ತೆಗೆದು ಪರೀಕ್ಷೆ ಕಳುಹಿಸುತ್ತಿಲ್ಲ ಎನ್ನುವ ಕುರಿತು ದೂರುಗಳಿವೆ. ಸರ್ಕಾರಿ ಕ್ವಾರಂಟೈನ್‌ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಸೂಚನೆ ನೀಡುವುದರಿಂದ ವ್ಯವಸ್ಥಿತವಾಗಿ ನಡೆಯಲು ಸಾಧ್ಯವಾಗುತ್ತದೆ. ಕ್ವಾರಂಟೈನ್‌ ಕೇಂದ್ರಗಳಿಗಾಗಿ ಖಾಸಗಿ ಕಟ್ಟಡ ಹಾಗೂ ವಾಹನಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಗಳು ಅಸಮರ್ಪಕವಾಗುತ್ತಿದೆ ಎನ್ನುವ ದೂರುಗಳಿದ್ದು, ಸಂಬಂಧಿಸಿದ ಅಧಿಕಾರಿಗಳ ಗಮನ ಹರಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಸರ್ಕಾರ ಯಾರಿಗೂ ರಿಯಾಯಿತಿ ನೀಡೋದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಕ್ವಾರಂಟೈನ್‌ ಕೇಂದ್ರಗಳಿಗೆ ಖರೀದಿಸುವ ತುರ್ತು ಆಹಾರ ವಸ್ತುಗಳ ವೆಚ್ಚವನ್ನು ಜಿಲ್ಲಾಡಳಿತದಿಂದ ಭರಿಸಲಾಗುವುದು. ಮಕ್ಕಳಿಗೆ ಅವಶ್ಯಕವಾಗಿರುವ ಹಾಲು ಅಂಗನವಾಡಿ ಕೇಂದ್ರಗಳ ಸಹಕಾರದಿಂದ ನೀಡಲಾಗುವುದು. ಮಕ್ಕಳ ಹಾಗೂ ಗರ್ಭಿಣಿಯರ ಪರೀಕ್ಷಾ ವರದಿ ನೆಗೆಟಿವ್‌ ಬಂದಲ್ಲಿ ಅವರನ್ನು ಹೋಂ ಕ್ವಾರಂಟೈನ್‌ಗಾಗಿ ಬಿಡುಗಡೆ ಮಾಡಲಾಗುವುದು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಹಾಗೂ ಡಾ.ಕೆ.ಪ್ರೇಮಾನಂದ, ‘ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ 62 ಕೇಂದ್ರಗಳಲ್ಲಿ 3,982 ಮಂದಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 487 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 3 ಜಿಲ್ಲೆಗಳಿಗೆಒಂದೇ ಪರೀಕ್ಷಾ ಕೇಂದ್ರ ಇರುವುದರಿಂದ ವರದಿ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 1,918 ವರದಿಗಳು ಬಂದಿದ್ದು, 542 ಮಂದಿಯ ವರದಿ ಬರಲು ಬಾಕಿ ಇದೆ. ಆರೋಗ್ಯ ಇಲಾಖೆಯಲ್ಲಿ ತಜ್ಞ ಹಾಗೂ ತರಬೇತಿ ಹೊಂದಿದ ಸಿಬ್ಬಂದಿ ಕೊರತೆ ಇರುವುದರಿಂದ ಪರೀಕ್ಷಾ ಕಾರ್ಯ ವಿಳಂಬವಾಗುತ್ತಿದೆ’ ಎಂದರು.

ಸಂಯಮ: ‘ಈಗಾಗಲೇ ಅನುಮತಿ ಪಡೆದುಕೊಂಡಿರುವವರು ಹಾಗೂ ನಿಶ್ಚಯ ಮಾಡಿರುವವರು ಭಾನುವಾರದಂದು ಮದುವೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆ, ಸರ್ಕಾರಿ ನಿಯಮಗಳಿಗೆ ತೊಡಕುಂಟಾಗದಂತೆ ಸ್ವಯಂ ನಿಯಂತ್ರಣದಲ್ಲಿ ಕಾರ್ಯಕ್ರಮ ಮುಗಿಸಿ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಲಹೆ ನೀಡಿದ್ದಾರೆ.

‘ಸಿಂಧು ಬಂದ್‌’: ಮುಖ್ಯಮಂತ್ರಿಗಳ ಸೂಚನೆಯಂತೆ ತಾತ್ಕಾಲಿಕವಾಗಿ ‘ಸೇವಾ ಸಿಂಧು’ ಆ್ಯಪ್‌ ಬಂದ್‌ ಆಗಿದೆ. ಆಕ್ರಮವಾಗಿ ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾ ವಹಿಸಲಾಗುವುದು ಎಂದು ಸಚಿವ ಕೋಟ ತಿಳಿಸಿದರು.

ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು, ಎಎಸ್‌ಪಿ ಹರಿರಾಂಶಂಕರ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಬು ಹೆಗ್ಡೆ ತಗ್ಗರ್ಸೆ, ಗೌರಿ ದೇವಾಡಿಗ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್‌, ಉಪಾಧ್ಯಕ್ಷ ರಾಮ್‌ಕಿಷನ್‌ ಹೆಗ್ಡೆ, ಸದಸ್ಯರಾದ ಪ್ರವೀಣ್‌ಕುಮಾರ ಶೆಟ್ಟಿ ಕಡ್ಕೆ, ಕರಣ್‌ ಪೂಜಾರಿ, ಕಾರ್ಯನಿರ್ವಹಣಾಧಿಕಾರಿಗಳಾದ ಕೇಶವ್‌ ಶೆಟ್ಟಿಗಾರ್‌, ಭಾರತಿ, ತಹಶೀಲ್ದಾರ್‌ಗಳಾದ ತಿಪ್ಪೇಸ್ವಾಮಿ, ಬಿ.ಪಿ.ಪೂಜಾರ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ಗೋಪಿಕೃಷ್ಣ, ಸುರೇಶ್‌ ನಾಯಕ್‌, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT