ಉಡುಪಿ: ಇಲ್ಲಿನ ಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ಸಿಕ್ಕಿದ್ದು, ಶುಕ್ರವಾರ ರಥಬೀದಿಯಲ್ಲಿ ವಿಟ್ಲಪಿಂಡಿ ಉತ್ಸವ ನಡೆಯಲಿದೆ.
ಕೋವಿಡ್ ಕಾರಣದಿಂದ ಉತ್ಸವದಲ್ಲಿ ಸಾರ್ವಜನಿಕರು ಭಾಗ ವಹಿಸಲು ಅವಕಾಶ ನೀಡಿಲ್ಲ. ಮಠದ ಸಿಬ್ಬಂದಿ ಹಾಗೂ ಯತಿಗಳ ಉಪಸ್ಥಿತಿಯಲ್ಲಿ ಕೃಷ್ಣ ಜನ್ಮಾಷ್ಟಮಿ ನಡೆಯುತ್ತಿದೆ.
ಗುರುವಾರ ಕೃಷ್ಣನಿಗೆ ಸುವರ್ಣ ತೊಟ್ಟಿಲಲ್ಲಿ ಕುಳಿತ ಬಾಲಗೋಪಾಲನ ಅಲಂಕಾರ ಮಾಡಲಾಗಿತ್ತು. ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಲಕ್ಷ ತುಳಸಿ ಅರ್ಚನೆ ಮಾಡಿ ಮಹಾಪೂಜೆ ನೆರವೇರಿಸಿದರು.
ಶುಕ್ರವಾರ ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿ ಉತ್ಸವದಲ್ಲಿ ಚಿನ್ನದ ರಥದಲ್ಲಿ ಕೃಷ್ಣನ ಮಣ್ಣಿನ ಮೂರ್ತಿಯ ಮೆರವಣಿಗೆ ಮಾಡಲಾಗುವುದು. ಬಳಿಕ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ. ಭಕ್ತರಿಗೆ ಹಂಚಲು ಲಕ್ಷ ಉಂಡೆ ಚಕ್ಕುಲಿ ತಯಾರಿಸಲಾಗಿದೆ.