ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥರು ವಿಧಿವಶರಾಗಿ 1 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 19ರಂದು ಮಧ್ಯಾಹ್ನ 12ಕ್ಕೆ ಉಪ್ಪೂರಿನಲ್ಲಿರುವ ಸ್ಪಂದನ ವಿಶೇಷ ಮಕ್ಕಳ ವಿದ್ಯಾಲಯದಲ್ಲಿ ‘ಲಕ್ಷ್ಮೀವರ ಸಂಸ್ಮರಣೆ’ ಕಾರ್ಯಕ್ರಮ ನಡೆಯಲಿದೆ.
ಸ್ಪಂದನ ವಿಶೇಷ ಶಾಲೆಯ ಮೇಲೆ ಶಿರೂರು ಶ್ರೀಗಳಿಗೆ ವಿಶೇಷವಾದ ಪ್ರೀತಿ ಇತ್ತು. ಹಾಗಾಗಿ, ಇಲ್ಲಿಯೇ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರ ಅಭಿಮಾನಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಮಠದ ಈಶವಿಠಲದಾಸ ಸ್ವಾಮೀಜಿ ಉಪಸ್ಥಿತರಿರಲಿದ್ದು, ಸ್ವಾಮೀಜಿ ಜತೆಗಿನ ಒಡನಾಟ, ಶ್ರೀಗಳ ವ್ಯಕ್ತಿತ್ವವನ್ನು ಹಂಚಿಕೊಳ್ಳಲಿದ್ದಾರೆ.
ವಕೀಲರಾದ ರವಿಕಿರಣ್ ಮುರ್ಡೇಶ್ವರ್, ಉದ್ಯಮಿ ಮನೋಹರ್ ಶೆಟ್ಟಿ, ಎಎಸಿಇ ಶಿಕ್ಷಣ ಸಂಸ್ಥೆಯ ನಿರ್ದೇಶಕ ಲಾತವ್ಯ ಆಚಾರ್ಯ, ಶ್ರೀಕಾಂತ್ ಶೆಟ್ಟಿ, ಸ್ಪಂದನ ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥ ಜನಾರ್ಧನ್ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 11.15ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ, ಮಧ್ಯಾಹ್ನ ವಿಶೇಷ ಮಕ್ಕಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಲಕ್ಷ್ಮೀವರ ತೀರ್ಥರ ಅಭಿಮಾನಿ ಬಳಗ ತಿಳಿಸಿದೆ.