ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ಜಾರಿ ನಿಶ್ಚಿತ: ಬೊಮ್ಮಾಯಿ

Last Updated 3 ಡಿಸೆಂಬರ್ 2020, 13:04 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಯಾಗುವುದು ನಿಶ್ಚಿತ. ಕಾನೂನು ಜಾರಿ ವಿಷಯದಲ್ಲಿ ಸರ್ಕಾರದಲ್ಲಿ ಗೊಂದಲಗಳಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಸಚಿವರು, ಉತ್ತರ ಪ್ರದೇಶ ಸರ್ಕಾರ ಈಚೆಗೆ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಸುಗ್ರೀವಾಜ್ಞೆ ಹೊರಡಿಸಿದೆ. ಅದರ ಪ್ರತಿಯನ್ನು ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಮಧ್ಯಪ್ರದೇಶ, ಹರ್ಯಾಣ ರಾಜ್ಯಗಳಲ್ಲಿ ಜಾರಿಯಾಗುವ ಲವ್‌ ಜಿಹಾದ್ ಕಾನೂನನ್ನು ಅಧ್ಯಯನ ಮಾಡಿ, ಯಾವ ಅಂಶಗಳನ್ನು ಸೇರಿಸಬೇಕು ಎಂದು ನಿರ್ಧರಿಸಲಾಗುವುದು ಎಂದರು.

ಮಂಗಳೂರಿನಲ್ಲಿ ಈಚೆಗೆ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಲವ್ ಜಿಹಾದ್ ಕಾನೂನು ಜಾರಿ ಖಚಿತ ಎಂದು ಹೇಳಿದ್ದಾರೆ. ಮೊಘಲರ ಕಾಲದಿಂದಲೂ ಲವ್ ಜಿಹಾದ್ ಇದೆ ಎಂದಿರುವ ಸಿದ್ದರಾಮಯ್ಯ ಇನ್ನೂ ಮೊಘಲರ ಕಾಲದಲ್ಲಿಯೇ ಇದ್ದಾರೆ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.

ಡಿ.5ರ ರಾಜ್ಯ ಬಂದ್‌ ದಿನ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಸುಪ್ರೀಂಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿ ಬಂದ್ ಮಾಡಿದರೆ ನ್ಯಾಯಾಲಯದ ಆದೇಶ ಉಲ್ಲಂಘನೆ ಆಗಲಿದ್ದು, ಬಂದ್‌ ಮಾಡದಂತೆ ಮುಖ್ಯಮಂತ್ರಿ ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ. ನಾನೂ ಮನವಿ ಮಾಡುತ್ತೇನೆ ಎಂದರು.

ರಾತ್ರಿ ಕರ್ಫ್ಯೂ ಇಲ್ಲ

ಕೊರೊನಾ ಸೋಂಕು ಹೆಚ್ಚಾಗುವುದನ್ನು ತಡೆಯಲು ರಾತ್ರಿ ಕರ್ಫ್ಯೂ ಜಾರಿ ಚಿಂತನೆ ಸರ್ಕಾರದ ಮುಂದಿಲ್ಲ. ಬದಲಿಗೆ, ಹೆಚ್ಚು ಜನರು ಸೇರದಂತೆ ಎಚ್ಚರ ವಹಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಅದರಂತೆ, ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಜನ ಸೇರದಂತೆ ತಡೆಯುವ ಚಿಂತನೆ ಇದೆ ಎಂದರು.

ಕೆಜೆ ಹಳ್ಳಿ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT