ಕಾರ್ಕಳ: ತಾಲ್ಲೂಕಿನ ಕೂಡಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜಿಲ್ಲಾ ಮಲೆಕುಡಿಯ ಸಂಘದ ಸಮುದಾಯ ಭವನದ ಉದ್ಘಾಟನೆ ಹಾಗೂ ದಶಮಾನೋತ್ಸವ ಪ್ರಯುಕ್ತ ಮುಕ್ತ ಕ್ರೀಡೋತ್ಸವ ಅಂಗವಾಗಿ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.
ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅನಿಲ ಎಸ್ ಪೂಜಾರಿ ಮಾಳ ಮಾತನಾಡಿ, ಮಲೆಕುಡಿಯ ಸಮುದಾಯ ಭವನದ ಉದ್ಘಾಟನೆಯನ್ನು ಕೂಡಾ ಸಂಘವು ಒಗ್ಗಟ್ಟಿನೊಂದಿಗೆ ಶೀಘ್ರ ನೆರವೇರಿಸುವಂತಾಗಲಿ. ಮಲೆಕುಡಿಯ ಸಂಘವು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವ ಸಂಘವಾಗಿ ಬೆಳೆಯಲಿ. ಸಂಘದಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತಾಗಲಿ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಮಲೆಕುಡಿಯ ಸಂಘದ ಕೋಶಾಧಿಕಾರಿ ಕೃಷ್ಣ ಧರ್ಮಸ್ಥಳ, ಸಂಘದ ಬೆಳ್ತಂಗಡಿ ತಾಲ್ಲೂಕು ಸಮಿತಿಯ ಸಹಕಾರ್ಯದರ್ಶಿ ಸುಂದರ ಕೆ. ಶಿಶಿಲ, ಮುಡಾರು ಗ್ರಾಮ ಪಂಚಾಯಿತಿ ಸದಸ್ಯ ರಜತ್ ರಾಮ್ಮೋಹನ್, ನೋಣಯ್ಯ ಕುತ್ತಾರು, ಪ್ರಗತಿಪರ ಕೃಷಿಕ ಕೂರ ಗೌಡ ಮಾಳ, ಭೋಜ ಗೌಡ ಕೆರ್ವಾಶೆ ಇದ್ದರು.
ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ಅಧ್ಯಕ್ಷತೆ ವಹಿಸಿದ್ದರು. ಪುಷ್ಪಾ ಶ್ರೀಧರ್ ಗೌಡ ಸ್ವಾಗತಿಸಿದರು. ಶೀನಪ್ಪ ನಲ್ಲೂರು ನಿರೂಪಿಸಿದರು. ಸುಂದರಿ ವಂದಿಸಿದರು. ಪಂದ್ಯಾಟದಲ್ಲಿ ಒಟ್ಟು 26 ತಂಡಗಳು ಭಾಗವಹಿಸಿದವು.