ಉಡುಪಿ: ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ‘ಸ್ವಚ್ಛ ಕರಾವಳಿ-ಸುರಕ್ಷಿತ ಸಾಗರ’ ಅಭಿಯಾನದಡಿ ಶುಕ್ರವಾರ ಸಮುದ್ರ ತೀರ ಸ್ವಚ್ಛತಾ ಕಾರ್ಯಕ್ರಮ ಮಲ್ಪೆಯ ಸಮುದ್ರ ತೀರದಲ್ಲಿ ನಡೆಯಿತು.
ಬಂಟಕಲ್ನ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ಕ್ರಾಸ್ ಘಟಕ, ಪರಿಸರ ಘಟಕದ ಭೂ ವಿಜ್ಞಾನ ಸಚಿವಾಲಯ, ವಿಜ್ಞಾನ ಪ್ರಸಾರ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
800 ಮೀಟರ್ ಸಮುದ್ರ ತೀರದಲ್ಲಿ ಸ್ವಚ್ಛಾತಾ ಕಾರ್ಯ ನಡೆಸಿದ ವಿದ್ಯಾರ್ಥಿಗಳು ಪರಿಸರಕ್ಕೆ ಮಾರಕವಾಗುವ ವಸ್ತುಗಳನ್ನು ಹೆಕ್ಕಿದರು. ಪಾದರಕ್ಷೆಗಳು, ಗಾಜಿನ ಬಾಟಲಿಗಳು, ಪಾಲಿಥಿನ್ ಚೀಲಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.
ಇದೇವೇಳೆ ಪ್ಲಾಸ್ಟಿಕ್ನಿಂದ ಉಂಟಾಗುವ ಪರಿಸರ ಮಾಲಿನ್ಯದ ಬಗ್ಗೆ ಅರಿವು ಮೂಡಿಸಿ ಬೀಚ್ ಮಾಲಿನ್ಯ ತಡೆಯ ಕುರಿತು ಮಾಹಿತಿ ನೀಡಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರು, ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಶುಭ ಹಾರೈಸಿದರು. ಮಲ್ಪೆ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಬೀಚ್ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಇದ್ದರು.