ಉಡುಪಿ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಪ್ರಮುಖ 110 ದೇವಾಲಯಗಳಲ್ಲಿ ಏಪ್ರಿಲ್ 26 ರಂದು ಸಾಮೂಹಿಕ ವಿವಾಹಗಳು ನಡೆಯಲಿವೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ವಿವಾಹ ನೋಂದಣಿಗೆ ಎಪಿಎಲ್, ಬಿಪಿಎಲ್ ಮಾನದಂಡ ಇಲ್ಲ. ವರನಿಗೆ ಹಾರ, ಶರ್ಟ್, ಶಲ್ಯ ಖರೀದಿಗೆ ₹ 5,000, ವಧುವಿಗೆ ಸೀರೆ, ರವಿಕೆ ಖರೀದಿಗೆ ₹10,000, ಚಿನ್ನದ ತಾಳಿ, ಗುಂಡಿಗೆ ₹ 40,000 ನೀಡಲಾಗುವುದು. ಈ ಮೊತ್ತವನ್ನು ವಿವಾಹದ ದಿನ ವಧು–ವರರ ಖಾತೆಗೆ ಆರ್ಟಿಜಿಎಸ್ ಮೂಲಕ ಜಮೆ ಮಾಡಲಾಗುವುದು ಎಂದರು.
ಹೆಸರು ನೋಂದಣಿಗೆ ಮಾರ್ಚ್ 27 ಕೊನೆಯ ದಿನ. ಏಪ್ರಿಲ್ 1ರಂದು ನೋಂದಾಯಿತ ವಧು–ವರರ ವಿವರಗಳನ್ನು ದೇವಾಲಯಗಳಲ್ಲಿ ಪ್ರಕಟಿಸಲಾಗುವುದು. ಏಪ್ರಿಲ್ 6ರವರೆಗೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. 11ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ. ಸಾಮೂಹಿಕ ವಿವಾಹದ ಬಗ್ಗೆ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಶೀಘ್ರ ಸಂಖ್ಯೆಯನ್ನು ತಿಳಿಸಲಾಗುವುದು ಎಂದು ಕೋಟ ತಿಳಿಸಿದರು.