ಬೆಂಗಳೂರು: ‘ಇ-ಕಾಮರ್ಸ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ‘ಕ್ಯೂನೆಟ್’ ಕಂಪನಿ ನಿಷೇಧಿಸಬೇಕು’ ಎಂದು ಒತ್ತಾಯಿಸಿ ಸಂತ್ರಸ್ತರು ನಗರದ ಸ್ವಾತಂತ್ರ್ಯ ಉದ್ಯಾನದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
‘ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಿ ಎಂದು ಆಮಿಷವೊಡ್ಡಿದ್ದ ಕಂಪನಿ, ರಾಜ್ಯದ ಸಾವಿರಾರು ಜನರಿಂದ ಹಣ ಕಟ್ಟಿಸಿಕೊಂಡಿದೆ. ಅದನ್ನು ವಾಪಸ್ ಕೊಡದೆ ವಂಚಿಸಿದೆ’ ಎಂದು ಪ್ರತಿಭಟನಾಕಾರರು ದೂರಿದರು.
‘ಕಂಪನಿಯ ಪ್ರತಿನಿಧಿಗಳೇ ನಮ್ಮನ್ನು ಸಂಪರ್ಕಿಸಿ ಹಣ ಹೂಡಿಕೆ ಮಾಡಿಸಿದ್ದರು. ಚೈನ್ಲಿಂಕ್ ಮೂಲಕ ವ್ಯವಹಾರ ಮಾಡಬೇಕೆಂದು
ಹೇಳಿದ್ದರು. ಹೀಗಾಗಿ, ನಾವು ನಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಂದಲೂ ಹಣ ಹೂಡಿಕೆ ಮಾಡಿಸಿದ್ದೆವು. ವೈದ್ಯರು, ಟೆಕಿಗಳು ಸಹ ಹಣ ಹೂಡಿಕೆ ಮಾಡಿದ್ದರು’
‘ಎಲ್ಲರಿಗೂ ಕಂಪನಿ ವಂಚನೆ ಮಾಡಿದೆ. ಕಂಪನಿ ವಿರುದ್ಧ ಹಲಸೂರು, ಕಾಟನ್ಪೇಟೆ, ಕೆಂಗೇರಿ, ವಿಧಾನಸೌಧ ಠಾಣೆಗಳಿಗೆ ದೂರು ನೀಡಿದ್ದೇವೆ. ಈ ಪ್ರಕರಣವನ್ನು ಸರ್ಕಾರವು ಸಿಐಡಿಗೆ ವಹಿಸಬೇಕು. ತಪ್ಪಿತಸ್ಥರನ್ನು ಬಂಧಿಸಿ ನಮ್ಮ ಹಣ ವಾಪಸ್ ಕೊಡಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.