ವಾರಕ್ಕೊಂದು ಅಣುಬಾಂಬ್
ನವದೆಹಲಿ, ಮೇ. 12– ವಾರಕ್ಕೊಂದು ಅಣುಬಾಂಬ್ ತಯಾರಿಸುವ ತಾಂತ್ರಿಕ ಸಾಮರ್ಥ್ಯವನ್ನು ಭಾರತ 1970ರ ಹೊತ್ತಿಗೆ ಪಡೆದಿರುತ್ತದೆ ಎಂದು ಲಂಡನ್ನಿನಿಂದ ಪ್ರಕಟವಾಗುವ ‘ಸೈನ್ಸ್’ ಮಾಸಪತ್ರಿಕೆ ತಿಳಿಸಿದೆ.
‘ಇಂಡಿಯನ್ ನ್ಯೂಕ್ಲಿಯರ್ ಡೈಲೆಮ’ ಎಂಬ ಪುಸ್ತಕದಲ್ಲಿ ಸೈನ್ಸ್ ಮಾಸಪತ್ರಿಕೆಯ ಅಭಿಪ್ರಾಯಗಳನ್ನು ಉದ್ಧರಿಸಲಾಗಿದೆ.
ಈ ಪುಸ್ತಕದ ಕರ್ತೃ ಜಿ.ಜಿ. ಮೀರ್ ಚಂದಾನಿ. ಇವರು ರಕ್ಷಣಾ ಸಚಿವ ಖಾತೆಯಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದ ಡೈರೆಕ್ಟರ್ ಆಗಿದ್ದರು. ಆಕಾಶವಾಣಿಯ ಸುದ್ದಿ ವಿಭಾಗದ ಡೈರೆಕ್ಟರ್ ಆಗಿದ್ದರು.
ಪಾನ ನಿರೋಧ: ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಲು ಎಂ.ಪಿ.ಗಳ ಸಲಹೆ
ನವದೆಹಲಿ, ಮೇ 12– ಶೇಕ್ಚಂದ್ ಸಮಿತಿ ಶಿಫಾರಸುಗಳನ್ನು ಅನುಷ್ಠಾನಗೊಳಿಸದ ಕಾರಣ ಸರ್ಕಾರದ ವಿರುದ್ಧ ಸಂಸತ್ ಸದಸ್ಯರು ಸಾಮೂಹಿಕ ಕ್ರಮ ಕೈಗೊಳ್ಳಬೇಕೆಂದು ಪಾನನಿರೋಧದ ಬಗೆಗಿನ ಸಂಸತ್ ಸದಸ್ಯರ ಸಭೆಯಲ್ಲಿ ಇಂದು ತಿಳಿಸಲಾಯಿತು.
ಸಮ್ಮೇಳನದ ಎರಡನೇ ದಿನವಾದ ಇಂದು ಆಚಾರ್ಯ ಕೃಪಲಾನಿ, ಶ್ರೀ ವಿ.ಸಿ. ಶುಕ್ಲ, ಪ್ರಕಾಶ ವೀರಶಾಸ್ತ್ರಿ ಮಾತನಾಡಿದರು. ಅಧ್ಯಕ್ಷತೆಯನ್ನು ಶ್ರೀ ಜಿ. ರಾಮಚಂದ್ರನ್ ವಹಿಸಿದ್ದರು.
‘ಹೊಸೂರು ಕರ್ನಾಟಕಕ್ಕೆ’: ಮೆರವಣಿಗೆ– ಸಭೆ
ಬೆಂಗಳೂರು, ಮೇ 12 – ‘ಅಚ್ಚ ಕನ್ನಡ ಪ್ರದೇಶವಾದ ಸಮಗ್ರ ಹೊಸೂರು ತಾಲ್ಲೂಕನ್ನು ಕರ್ನಾಟಕ್ಕಕೆ ಸೇರಿಸಬೇಕೆಂದು ಒತ್ತಾಯಪಡಿಸಲು ಕನ್ನಡ ಚಳಿವಳಿಗಾರರು ಇಂದು ಹೊಸೂರಿನಲ್ಲಿ ಸಭೆ, ಮೆರವಣಿಗೆ ಮತ್ತು ಸತ್ಯಾಗ್ರಹ ನಡೆಸಿದರು.
ಪ್ರಸ್ತುತ ಮದ್ರಾಸ್ ರಾಜ್ಯದಲ್ಲಿರುವ ಹೊಸೂರಿಗೆ ಬೆಂಗಳೂರಿನ ಸುಮಾರು 60 ಮಂದಿಯನ್ನೊಳಗೊಂಡ ಕನ್ನಡ ಚಳವಳಿಗಾರರ ತಂಡ ಆಗಮಿಸಿದಾಗ ಮಾರ್ಗದ ಇಕ್ಕಡೆಗಳಲ್ಲಿ ನಿಂತಿದ್ದ ಜನತೆ ಹಾರ್ದಿಕ ಸ್ವಾಗತ ನೀಡಿದರು.
ಪರಿಷತ್ತಿಗೆ ಕಟ್ಟಿಮನಿ ನಾಮಕರಣ?
ಬೆಂಗಳೂರು, ಮೇ 12 – ಪ್ರಸಿದ್ಧ ಕಾದಂಬರಿಕಾರ ಶ್ರೀ ಬಸವರಾಜ ಕಟ್ಟಿಮನಿ, ಪರಿಷತ್ತಿನ ಹಾಲಿ ಸದಸ್ಯ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀ ಕೆ. ಸುಬ್ಬರಾವ್ ಮತ್ತು ಚಿಕ್ಕಮಗಳೂರಿನ ಶ್ರೀ ಎಂ.ಎಲ್. ವಾಸುದೇವಮೂರ್ತಿ ಅವರುಗಳನ್ನು ರಾಜ್ಯದ ವಿಧಾನಪರಿಷತ್ತಿಗೆ ನಾಮಕರಣ ಮಾಡಲಾಗುವುದೆಂದು ತಿಳಿದುಬಂದಿದೆ.
ಕೇರಳ ಸರ್ಕಾರ ಉರುಳಿಸಲು ಕಾಂಗ್ರೆಸ್ ಸಂಚು: ಗೋಪಾಲನ್
ನವದೆಹಲಿ, ಮೇ 12– ಕೇರಳದ ಸಂಯುಕ್ತರಂಗ ಸರ್ಕಾರವನ್ನು ಪದಚ್ಯುತಗೊಳಿಸಲು ಕಾಂಗ್ರೆಸ್ ಪಕ್ಷ ಹೊಸರೀತಿಯ ವಿಮೋಚನಾ ಹೋರಾಟದ ಒಳಸಂಚನ್ನು ನಡೆಸುತ್ತಿದೆ ಎಂದು ವಾಮ ಕಮ್ಯುನಿಸ್ಟ್ ಕಾಯಕ ಶ್ರೀ ಎ.ಕೆ. ಗೋಪಾಲನ್ ಇಂದು ಇಲ್ಲಿ ಆಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.