ಉಡುಪಿ: ಜಿಲ್ಲೆಯಾದ್ಯಂತ ಮಂಗಳವಾರ ನಾಗರ ಪಂಚಮಿ ಹಬ್ಭವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ ಕಾಪು ತಾಲ್ಲೂಕಿನ ಮಜೂರಿನಲ್ಲಿ ಜೀವಂತ ನಾಗರ ಹಾವಿಗೆ ಜಲಾಭಿಷೇಕ ನಡೆಸಿ, ದೀಪ ಬೆಳಗಲಾಯಿತು.
ಮಜೂರಿನ ನಿವಾಸಿ ಗೋವರ್ಧನ ಭಟ್ 20 ವರ್ಷಗಳಿಂದ ರಸ್ತೆಯಲ್ಲಿ ಅಪಘಾತಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ನಾಗರ ಹಾವುಗಳನ್ನು ರಕ್ಷಿಸಿ ಚಿಕಿತ್ಸೆ ನೀಡುತ್ತಿದ್ದು ಗುಣ ಮುಖವಾದ ಬಳಿಕ ಹಾವನ್ನು ಕಾಡಿಗೆ ಬಿಡುವ ಕಾಯಕದಲ್ಲಿ ತೊಡಗಿದ್ದಾರೆ. ಈಚೆಗೆ ಗಾಯಗೊಂಡು ಶುಶ್ರೂಷೆಯಲ್ಲಿದ್ದ ಹಾವಿಗೆ ನಾಗರ ಪಂಚಮಿಯ ದಿನ ಮನೆಯಲ್ಲಿ ಜಲ ಅಭಿಷೇಕ ಮಾಡಿ ಭಕ್ತಿ ಸಮರ್ಪಿಸಿದರು. ಈ ಭಾಗದಲ್ಲಿ ಗೋವರ್ಧನ ಭಟ್ ನಾಗರ ಹಾವಿನ ವೈದ್ಯ ಎಂದೇ ಖ್ಯಾತಿಯಾಗಿದ್ದಾರೆ.
ಹೆಬ್ರಿ ತಾಲ್ಲೂಕಿನ ಶಿವಪುರ ಕೆಳ ಖಜಾನೆಯ ಆಶ್ರಯ ನಾಗಬನದಲ್ಲಿ ನಾಗರಪಂಚಮಿ ಪೂಜೆ ನೆರವೇರಿತು. ಉಡುಪಿಯ ಬ್ರಹ್ಮಗಿರಿ ವೃತ್ತದಲ್ಲಿ ಇರುವ ನಾಗಬನ, ಕಿದಿಯೂರು ಹೋಟೆಲ್ ಬಳಿಯ ನಾಗಬನ ಹಾಗೂ ಕೃಷ್ಣಮಠದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು.