ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೂ ಇತ್ತಾ...?

Last Updated 11 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

'ಪ್ರಚಾರಕ್ಕೆ ವಿರೋಧ ಪಕ್ಷದವರಿಂದ ಹಣ ಪಡೆದರು' ಎಂಬ ಶೀರ್ಷಿಕೆಯಡಿ, 1967ರಲ್ಲಿ ನಡೆದ ಘಟನೆ ಕುರಿತು ವರದಿಯಾಗಿದೆ (ಪ್ರ.ವಾ., ಪ್ರಜಾಮತ ಏ. 10). ಕಡಿದಾಳ್ ಮಂಜಪ್ಪನವರು ವಿರೋಧ ಪಕ್ಷದವರಾದ ಶಾಂತವೇರಿ ಗೋಪಾಲಗೌಡರ ಆರ್ಥಿಕ ಪರಿಸ್ಥಿತಿಯನ್ನು ಅರಿತು ಧನಸಹಾಯ ಮಾಡಿದ್ದರು ಎಂಬ ಸಂಗತಿ ಅದರಲ್ಲಿ ಉಲ್ಲೇಖವಾಗಿದೆ.

ಆದರೆ, ಇಂದು ವಿರೋಧ ಪಕ್ಷದವರು ಎಂದರೆ ಸಾಕು; ಪಕ್ಷಭೇದವಿಲ್ಲದೆ ವಿರೋಧಿಗಳ ಮೇಲೆ ಲಗಾಮಿಲ್ಲದಂತೆ ನಾಲಿಗೆ ಹರಿಬಿಡುತ್ತಾರೆ. ತೀರಾ ವೈಯಕ್ತಿಕವಾಗಿ ಹೀಗಳೆಯುತ್ತಾರೆ. ಇದು ಖಂಡಿತಾ ಅಸಮರ್ಥನೀಯ, ಖಂಡನಾರ್ಹ ಹಾಗೂ ಅಸಹ್ಯ ಕೂಡ. ಕೇವಲ ಐವತ್ತು ವರ್ಷಗಳಲ್ಲಿ ರಾಜಕೀಯವೆಂದರೆ ಈ ರೀತಿ ಬದಲಾಗಿ ಹೋಗಿದೆಯೆಂದರೆ, ಇನ್ನು ಮುಂದೆ ಹೇಗೆ ಎಂದು ಊಹಿಸಲೂ ಕಷ್ಟವಾಗುತ್ತದೆ. ಈ ಘಟನೆಯನ್ನು ಓದಿದಾಗ 'ಹೀಗೂ ಇತ್ತಾ...?' ಎಂದು ಇಂದಿನವರು ಮೂಗಿನ ಮೇಲೆ ಬೆರಳಿಡಬೇಕು. ಇನ್ನಾದರೂ ರಾಜಕಾರಣಿಗಳು ಪರಸ್ಪರ ಕೆಸರೆರಚಾಟವನ್ನು ನಿಲ್ಲಿಸಿಯಾರೇ?

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಆಸಕ್ತಿ ಕೆರಳಿಸುವ ‘ಪ್ರಜಾ ಮತ’

ರಾಜಕೀಯ ಎನ್ನುವುದು ಅದೆಷ್ಟೇ ಕೊಳಕಾಗಿದ್ದರೂ ಆಸಕ್ತಿ ಕೆರಳಿಸುವ ಕ್ಷೇತ್ರ. ರಾಜಕಾರಣಿಗಳ ಹಣೆಬರಹವನ್ನು ಬರೆಯುವ ಚುನಾವಣೆಗಳೆಂದರೆ ಅದು ಮತ್ತಷ್ಟು ತೀವ್ರತರನಾದ ಆಸಕ್ತಿಯನ್ನು ಕೆರಳಿಸಿ ಬಿಡುತ್ತದೆ. ಇಂತಹ ದಿನಗಳಲ್ಲಿ ‘ಪ್ರಜಾವಾಣಿ’ಯ ‘ಪ್ರಜಾ ಮತ’ದಲ್ಲಿ ಬರುತ್ತಿರುವ ಸುದ್ದಿಗಳು, ಆಂಬೋಣಗಳು, ಟೀಕೆ– ಟಿಪ್ಪಣಿಗಳು, ವಿಮರ್ಶೆಗಳು ಓದುಗರಲ್ಲಿ ಮತ್ತಷ್ಟು ಆಸಕ್ತಿ ಬೆಳೆಸುತ್ತಿವೆ. ಜನಹಿತಕೆ ದುಡಿದವನು–ಮಿಡಿದವನು ‘ಪ್ರಜಾ ಮತ’ದ ಸರದಾರನಾಗುತ್ತಾನೆ. ಈ ದಿಸೆಯಲ್ಲಿ ಓದುಗನಿಗೆ ಖುಷಿ ನೀಡುತ್ತಿರುವ ಪತ್ರಿಕೆಗೆ ಅಭಿನಂದನೆ.

–ಎಚ್‌. ಆನಂದ್‌ ಕುಮಾರ್‌, ಚಿತ್ರದುರ್ಗ

ಪಕ್ಷಾಂತರ ಪರ್ವ

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಯಾರು ಯಾವಾಗ ಪಕ್ಷಾಂತರ ಮಾಡುತ್ತಾರೆ ಎಂದು ಹೇಳುವಂತಿಲ್ಲ. ಹಲವಾರು ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದಾತ ಟಿಕೆಟ್ ಸಿಗಲಿಲ್ಲ ಎಂದಾಕ್ಷಣ ಇನ್ನೊಂದು ಪಕ್ಷಕ್ಕೆ ಹಾರುತ್ತಾನೆ. ತಾನಿದ್ದ ಹಿಂದಿನ ಪಕ್ಷವನ್ನು ಟೀಕಿಸತೊಡಗುತ್ತಾನೆ. ಅಲ್ಲೂ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಫರ್ಧಿಸುತ್ತೇನೆ ಎನ್ನುತ್ತಾನೆ. ಕೆಲವು ಸ್ವಾಮೀಜಿಗಳೂ ಇದಕ್ಕೆ ಹೊರತಲ್ಲ. ಚುನಾವಣೆ ಬಂದಾಕ್ಷಣ ಒಬ್ಬ ಅಭ್ಯರ್ಥಿ ಇನ್ನೊಬ್ಬ ಅಭ್ಯರ್ಥಿಯ ಪೂರ್ವ ಇತಿಹಾಸವನ್ನು ಜಾಲಾಡುವ ಮೂಲಕ ಜನರಿಗೆ ಮನರಂಜನೆ ಒದಗಿಸುತ್ತಾನೆ. ವಯೋವೃದ್ಧರೂ ಕೊನೆಯುಸಿರು ಇರುವ ತನಕ ಕುರ್ಚಿಗಾಗಿ ಕಾದಾಡುತ್ತಾರೆ. ಒಟ್ಟಿನಲ್ಲಿ ಮತದಾರ ಜಾಗೃತನಾಗಬೇಕಾಗಿದೆ. ಜನರ ಸಮಸ್ಯೆಗಳಿಗೆ ಸ್ಫಂದಿಸುವ ಅರ್ಹ ಅಭ್ಯರ್ಥಿ ಆರಿಸಿ ಬರಬೇಕಾಗಿದೆ.

–ಪಿ. ಜಯವಂತ ಪೈ, ಕುಂದಾಪುರ

ಕ್ರೂರ ರಾಜಕೀಯ

ಮಾರ್ಚ್‌ 24ರ ‘ಪ್ರಜಾ ಮತ’ದ ‘ಕೇಳಿದ್ದು ನೋಡಿದ್ದು’ ಅಂಕಣದಲ್ಲಿ (‘ಪಾಟೀಲ್‌ಗೆ ಎದಿರೇಟು’) ವಿರೇಂದ್ರ ಪಾಟೀಲರಿಗೆ ಆದ ಅನ್ಯಾಯ ಓದಿ ಅತೀವ ವೇದನೆಯಾಯಿತು. ರಾಜಕೀಯ ಎನ್ನುವುದು ಎಷ್ಟೊಂದು ಕ್ರೂರ ಅಲ್ಲವೇ?

1989ರಲ್ಲಿ ವಿರೇಂದ್ರ ಪಾಟೀಲರ ನಾಯಕತ್ವದಿಂದಲೇ ಅಧಿಕಾರಕ್ಕೆ ಬಂದ ಕಾಂಗ್ರೆಸ್‌, ಅವರಿಗೆ ಅವಧಿ ಪೂರ್ಣಗೊಳಿಸಲು ಅವಕಾಶ ನೀಡದೇ ಇದ್ದದ್ದು ದುರಂತ. ಇದು ರಾಜೀವ್‌ ಗಾಂಧಿ ಅವರ ಅಪ್ರಬುದ್ಧ ರಾಜಕಾರಣಕ್ಕೆ ಹಿಡಿದ ಕನ್ನಡಿಯಾಗಿದೆ.

–ಗುರು ಜಗಳೂರು, ಹರಿಹರ

ಶ್ಲಾಘನೀಯ ಕಾರ್ಯ

ಪ್ರಜಾ ಮತ ಪುಟದಲ್ಲಿ 'ವೋಟ್ ಮಾಡೋಣ ಬನ್ನಿ' ಎಂಬ ಘೋಷಣೆ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ತುಂಬಾ ಇಷ್ಟವಾಯಿತು. ಎಲ್ಲರೂ ತಪ್ಪದೇ ನ್ಯಾಯ ಮತ್ತು ನಿರ್ಭೀತಿಯಿಂದ ಯೋಗ್ಯ ಅಭ್ಯರ್ಥಿಗೆ ವೋಟು ಹಾಕಬೇಕು.

–ಸೂರಜ್ ಪತಂಗೆ, ಆಳಂದ,  ಕಲಬುರ್ಗಿ ಜಿಲ್ಲೆ 

ನಮ್ಮ ಜಾತಿ!

ಅವನು ಅಪ್ರಾಮಾಣಿಕ
ಅವನು ಭ್ರಷ್ಟ,
ಅವನು ಅವಿವೇಕಿ,
ಅವನು ಕ್ರಿಮಿನಲ್,
ಅವನು ಜೈಲಿನಲ್ಲಿದ್ದವ,
ಅವನು ಲಂಪಟ
ಆದರೂ ನಮ್ಮ ವೋಟು ಅವನಿಗೆ
ಯಾಕೆಂದರೆ ಅವನು ನಮ್ಮ ಜಾತಿ!

-ಎಂ. ಮಲ್ಲಿಕಾರ್ಜುನ, ಬೆಂಗಳೂರು

ನಮ್ಮ ಕರ್ತವ್ಯ!

ರಾಜಕೀಯ ರಾಕ್ಷಸ ಇದ್ದಂತೆ
ಭರವಸೆಗಳನ್ನು ನೀಡುವುದೇ ಇವರ ಕೆಲಸವಂತೆ
ಚುನಾವಣೆಯಲ್ಲಿ ಗೆಲ್ಲುವುದೇ ಅವರ ಗುರಿಯಂತೆ.

‎ಮೋಸ ವಂಚನೆ ಇವೆರಡೂ ಇವರ ದೋಸ್ತಿಗಳಂತೆ
ಜನರ ಕಷ್ಟಗಳಿಗೂ ಇವರಿಗೂ ಸಂಬಂಧವಿಲ್ಲವಂತೆ
ಇವರಿಗೆಲ್ಲಾ ಮತ ನೀಡುವುದು ನಮ್ಮೆಲ್ಲರ ಕರ್ತವ್ಯವಂತೆ!

–ಅಪ್ಪಾರಾಯ ಶಂಕರ ಕುಂಬಾರ, ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT