ಶೂಶ್ರೂಷಕರ ವೃತ್ತಿಗೆ ಕಾಲಿಡುವ ಮುನ್ನವೇ ವೃತ್ತಿ ಬದುಕಿನಲ್ಲಿ ಎದುರಾಗಬಹುದಾದ ಸವಾಲುಗಳು ಹಾಗೂ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಧೈರ್ಯಗೆಡದೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುವಂತಹ ತರಬೇತಿ ದೊರೆತಿತ್ತು. ಹಾಗಾಗಿ, ಕೋವಿಡ್ ವಾರ್ಡ್ನಲ್ಲಿ ಧೈರ್ಯವಾಗಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಾಯಿತು. ಮನೆಯಲ್ಲಿ ಕುಟುಂಬ ಸದಸ್ಯರು ತೀವ್ರ ಆತಂಕ ವ್ಯಕ್ತಪಡಿಸಿದರೂ ದೃತಿಗೆಡದೆ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಚಿಕಿತ್ಸೆ ನೀಡುವಾಗ ಹಾಗೂ ಬಳಿಕ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿರುವುದರಿಂದ ಸೋಂಕು ತಗುಲುವ ಭಯವಿಲ್ಲ. ಕೋವಿಡ್ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದ್ದು ಸಾರ್ವಜನಿಕರು ನಿರ್ಲಕ್ಷ್ಯ ಮಾಡಬಾರದು. ಕೊರೊನಾ ಸೋಂಕು ಇಲ್ಲ ಎಂದು ಮೊಂಡುವಾದ ಮಾಡುವವರು ಕೋವಿಡ್ ವಾರ್ಡ್ಗೆ ಬಂದು ಸೋಂಕಿತರು ಅನುಭವಿಸುವ ಕಷ್ಟವನ್ನು ನೋಡಬೇಕು, ದಾದಿಯರ ಪರಿಶ್ರಮವನ್ನು ನೋಡಬೇಕು. ದಯವಿಟ್ಟು, ಕೋವಿಡ್ ಇಲ್ಲ ಎಂದು ಮಾಸ್ಕ್ ಧರಿಸದೆ, ವೈಯಕ್ತಿಕ ಅಂತರ ಕಾಪಾಡಿಕೊಳ್ಳದೆ ಸಮಾಜಕ್ಕೆ ಸೋಂಕು ಹರಡಿಸಬೇಡಿ. ಮನೆಯ ಹಿರಿಯ ಜೀವಗಳನ್ನು ಬಲಿಕೊಡಬೇಡಿ. ಮಾಸ್ಕ್ ಧರಿಸುವುದು, ಆಗಾಗ ಕೈತೊಳೆಯುವುದು, ಅಂತರ ಪಾಲಿಸುವುದರಿಂದ ಸೋಂಕಿನಿಂದ ದೂರವಿರಬಹುದು. ಲಾಕ್ಡೌನ್ ಸಂದರ್ಭ ಅನವಶ್ಯಕವಾಗಿ ಅಡ್ಡಾಡದೆ ಮನೆಯಲ್ಲಿ ಸುರಕ್ಷಿತವಾಗಿರಿ. ಲಸಿಕೆ ಹಾಕಿಸಿಕೊಂಡು, ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ.
–ಸೌಮ್ಯಾ, ಡಾ.ಟಿಎಂಎ ಪೈ ಆಸ್ಪತ್ರೆಯ ಶುಶ್ರೂಷಕಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.