ಉಡುಪಿ: ಲಾಕ್ಡೌನ್ ಸಂದರ್ಭ ಸರ್ಕಾರಕ್ಕೂ ಮಾದರಿಯಾಗುವಂತಹ ಕಾರ್ಯವನ್ನು ಶಾಸಕ ರಘುಪತಿ ಭಟ್ ನೇತೃತ್ವದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶ್ಲಾಘಿಸಿದರು.
ಸೋಮವಾರ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಉಚಿತ ಬಸ್ಗಳನ್ನು ಓಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಲಾಕ್ಡೌನ್ ಅವಧಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹೆಸರಿನಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ಮಾಡಿದೆ. ಅವುಗಳಲ್ಲಿ ಉಚಿತವಾಗಿ ಸಿಟಿ ಬಸ್ಗಳನ್ನು ಓಡಿಸುತ್ತಿರುವುದು ರಾಜ್ಯಕ್ಕೆ ಮಾದರಿ ಎಂದರು.
ಕೊರೊನಾ ಸೋಂಕು ತಡೆಗೆ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ನಿರ್ಧಾರಗಳಿಂದ ಪ್ರಚಂಚದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರಲು ಪೂರಕವಾಗಿದೆ ಎಂದು ಜಗತ್ತು ಒಪ್ಪಿಕೊಂಡಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಗೆದ್ದಿರುವ ಕಾರಣ, ಡಬ್ಲ್ಯುಎಚ್ಒ ನೇತೃತ್ವವನ್ನು ಭಾರತಕ್ಕೆ ಕೊಡಲಾಗಿದೆ ಎಂದರು.
ಶಾಸಕ ರಘುಪತಿ ಭಟ್ ಮಾತನಾಡಿ, ಲಾಕ್ಡೌನ್ನಿಂದಾಗಿ ಪೂರ್ಣ ಪ್ರಮಾಣದಲ್ಲಿ ಸಾರಿಗೆ ಸಂಚಾರ ಆರಂಭವಾಗದ ಪರಿಣಾಮ ಬಡವರು, ಸಣ್ಣ ಕಾರ್ಮಿಕರಿಗೆ ಮಣಿಪಾಲ ಸೇರಿದಂತೆ ಇತರೆಡೆಗಳಿಗೆ ತೆರಳಲು ಸಮಸ್ಯೆಯಾಗಿತ್ತು. ಈಗ ಒಂದು ವಾರ ಉಚಿತವಾಗಿ ಬಸ್ಗಳನ್ನು ಓಡಿಸಲಾಗುತ್ತಿದೆ ಎಂದರು.
ಆಯ್ದ ಏಳು ಮಾರ್ಗಗಳಲ್ಲಿ ಬಸ್ಸುಗಳು ಸಂಚರಿಸುತ್ತಿವೆ. ಪ್ರಯಾಣಿಕರು ಮಾಸ್ಕ್ಗಳನ್ನು ಧರಿಸಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಪ್ರಯಾಣಿಕರು ಈ ವ್ಯವಸ್ಥೆಯನ್ನು ಉಪಯೋಗ ಮಾಡಿಕೊಳ್ಳಬೇಕು. ಆರು ದಿನ ಪ್ರಯಾಣಿಕರ ಬಳಿ ಟಿಕೆಟ್ ಪಡೆಯಲಾಗುವುದಿಲ್ಲ, ಸೋಮವಾರದಿಂದ ಸಿಟಿ ಬಸ್ ಮಾಲೀಕರು ಬಸ್ ಓಡಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಬಸ್ನಲ್ಲಿ ಇಬ್ಬರು ಪಕ್ಷದ ಕಾರ್ಯಕರ್ತರು ನಿರ್ವಾಹಕರ ಕೆಲಸ ಮಾಡಲಿದ್ದಾರೆ. ಜತೆಗೆ ಪ್ರಯಾಣಿಕರ ಪ್ರಯಾಣದ ವಿವರಗಳನ್ನು ದಾಖಲಿಸಲಾಗುತ್ತದೆ. ಬಸ್ ಹತ್ತುವಾಗ ಪ್ರಯಾಣಿಕರಿಗೆ ಸ್ಯಾನಿಟೈಸರ್ ಹಾಕಲಾಗುವುದು. ಮಾಸ್ಕ್ ಧರಿಸಿರುವುದನ್ನು ಖಚಿತ ಪಡಿಸಿಕೊಂಡು ಒಳಬಿಡಲಾಗುವುದು ಎಂದರು.
ಸಂಸದೆ ಶೋಭಾ ಕರಂದ್ಲಾಜೆ,ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಮುಖಂಡರಾದ ಮಹೇಶ್ ಠಾಕೂರ್, ಯಶ್ಪಾಲ್ ಸುವರ್ಣ,