ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮಿದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗ ದಾನ

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸುದೀಪ್ ಪೂಜಾರಿ
Last Updated 29 ಮೇ 2019, 7:15 IST
ಅಕ್ಷರ ಗಾತ್ರ

ಉಡುಪಿ: ಬ್ರಹ್ಮಾವರದಲ್ಲಿ ಈಚೆಗೆ ಸಂಭವಿಸಿದ ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟುಬಿದ್ದು ಮಿದುಳು ನಿಷ್ಕ್ರಿಯಗೊಂಡಿದ್ದ ಸುದೀಪ್ ಪೂಜಾರಿ ಎಂಬುವರ ದೇಹದ ಅಂಗಾಂಗಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಬೆಂಗಳೂರು ಹಾಗೂ ಚೆನ್ನೈನ ಬಿಜಿಎಸ್‌ ಆಸ್ಪತ್ರೆಗೆ ರವಾನಿಸಲಾಯಿತು.

ಕೆಎಂಸಿ ಆಸ್ಪತ್ರೆಯಿಂದ ಅಂಗಾಂಗಗಳನ್ನು ಹೊತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ 2 ಆಂಬುಲೆನ್ಸ್‌ಗಳಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಸಿರು ಪಥದ (ಗ್ರೀನ್ ಕಾರಿಡಾರ್) ವ್ಯವಸ್ಥೆ ಮಾಡಲಾಗಿತ್ತು.

ಎರಡು ಕಾರ್ನಿಯ (ಕಣ್ಣು), ಎರಡು ಕಿಡ್ನಿ (ಮೂತ್ರಪಿಂಡ) ಕಸ್ತೂರಬಾ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಯಕೃತ್ತು ಮತ್ತು ಮೇದೋಜೀರಕ ಗ್ರಂಥಿಯನ್ನು (ಪ್ಯಾಂಕ್ರಿಯಾಸ್) ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ರೋಗಿಗಳಿಗೆ, ಹೃದಯ ಕವಾಟವನ್ನು (ಹಾರ್ಟ್ ವಾಲ್ವ್) ಮತ್ತು ಶ್ವಾಸಕೋಶವನ್ನು ಚೆನ್ನೈನ ಬಿಜಿಎಸ್ ಆಸ್ಪತ್ರೆಯ ರೋಗಿಗಳಿಗೆ ಅಳವಡಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದರು.

ಮೇ 27ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುದೀಪ್ ಪೂಜಾರಿ ಗಂಭೀರಗಾಯಗೊಂಡು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. 28ರಂದು ವೈದ್ಯರ ಸಮಿತಿ ಮಿದುಳು ಮರಣ ಹೊಂದಿರುವುದಾಗಿ ಘೋಷಿಸಿತು. ಬಳಿಕ ಸುದೀಪ್ ಪೂಜಾರಿ ಅವರ ಸಹೋದರರಾದ ಸಂದೀಪ್ ಪೂಜಾರಿ ಮತ್ತು ಪ್ರದೀಪ್ ಪೂಜಾರಿ ಅವರು ಅಂಗಾಂಗದಾನಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಯುವಕನ ದೇಹದ 8 ಅಂಗಾಂಗಳನ್ನು ಅವಶ್ಯಕತೆ ಇದ್ದ ರೋಗಿಗೆ ಅಳವಡಿಸಲು ನಿರ್ಧರಿಸಲಾಯಿತು ಎಂದು ವೈದ್ಯರು ತಿಳಿಸಿದರು.

ಜೀವ ಉಳಿಸಲು ಅಂಗದಾನ ಶ್ರೇಷ್ಠವಾದ ಕೆಲಸವಾಗಿದ್ದು, ಸಮಾಜದ ಪ್ರೋತ್ಸಾಹ ಅಗತ್ಯವಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT