ಮಂಗಳೂರು: ಸುಳ್ಯ ಸಮೀಪದ ಕೊಯಿನಾಡಿನ ಗೂಡುಗದ್ದೆಯಲ್ಲಿ ಗಿರೀಶ್ ಎಂಬವರ ಮನೆಗೆ ಶುಕ್ರವಾರ ಸಂಜೆ ಮೂವರು ನಕ್ಸಲೀಯರು ಬಂದಿದ್ದರು ಎಂಬ ಮಾಹಿತಿ ಲಭಿಸಿದೆ.
‘ಗಿರೀಶ್ ಅವರ ಮನೆಗೆ ಬಂದ ಮೂವರು ಪುರುಷರು ತಮಗೆ ಸಾಮಾಗ್ರಿಗಳು ಬೇಕು, ತಕ್ಷಣ ತಂದುಕೊಡಿ ಎಂದು ಹೇಳಿದರು. ಗಿರೀಶ್ ಅವರು ಕಲ್ಲುಗುಂಡಿಗೆ ಬಂದು ಸಾಮಗ್ರಿ ಖರೀದಿಸಿ ಮನೆಗೆ ತಲುಪುವಷ್ಟರಲ್ಲಿ ನಕ್ಸಲರು ಅಲ್ಲಿಂದ ಕಾಲ್ಕಿತ್ತಿದ್ದರು‘ ಎಂದು ಸ್ಥಳೀಯ ಮೂಲಗಳು ಶುಕ್ರವಾರ ರಾತ್ರಿ ‘ಪ್ರಜಾವಾಣಿ’ಗೆ ತಿಳಿಸಿವೆ.
ಮಡಿಕೇರಿ ಡಿವೈಎಸ್ಪಿ ಸುಂದರರಾಜ್ ಅವರ ನೇತೃತ್ವದಲ್ಲಿ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ನಕ್ಸಲರಿಗಾಗಿ ಹುಡುಕಾಟ ನಡೆಸಿದರೂ ನಕ್ಸಲೀಯರು ಪತ್ತೆಯಾಗಲಿಲ್ಲ.
ಉಪ್ಪಿನಂಗಡಿ ಸಮೀಪದ ಶಿರಾಡಿ ಮಿತ್ತಬೈಲಿನಲ್ಲಿ ಜನವರಿ 16ರಂದು ಮೂವರು ನಕ್ಸಲರು ಎರಡು ಮನೆಗಳಿಗೆ ಭೇಟಿ
ನೀಡಿದ್ದರು.
ಬಳಿಕ ಎಎನ್ಎಫ್ನಿಂದ ಶೋಧ ಕಾರ್ಯಾಚರಣೆಯೂ ನಡೆದಿತ್ತು. ಆದರೆ ನಕ್ಸಲರು ಪತ್ತೆಯಾಗಿರಲಿಲ್ಲ.